

ಮೈಸೂರು: ನಟ ದರ್ಶನ್ ತೂಗುದೀಪ ಅವರ ಮೈಸೂರು-ಟಿ ನರಸೀಪುರ ರಸ್ತೆಯಲ್ಲಿರುವ ‘ವಿನೀಶ್ ದರ್ಶನ್ ಮಾರ್ವಾರಿ ಸ್ಟಡ್ ಫಾರ್ಮ್’ನಲ್ಲಿ ‘Horse for Sale’ ಎಂಬ ದೊಡ್ಡ ಬೋರ್ಡ್ ಅಳವಡಿಸಲಾಗಿದ್ದು, ಬೋರ್ಡ್ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.
ಈ ಬೋರ್ಡ್ ಹಲವು ಕುತೂಹಲಗಳನ್ನು ಮೂಡಿಸಿದ್ದು, ಫಾರ್ಮ್ನಲ್ಲಿ ಸಾಕಲಾಗುತ್ತಿದ್ದ ದುಬಾರಿ ತಳಿಯ ಕುದುರೆಗಳನ್ನು ಮಾರಾಟ ಮಾಡಲು ದರ್ಶನ್ ನಿರ್ಧರಿಸಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
2024ರ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್, ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆ ವಿಶ್ರಾಂತಿ ಪಡೆಯಲು ಟಿ ನರಸೀಪುರ ಸಮೀಪದ ಓಲ್ಡ್ ಕೆಂಪಯ್ಯನ ಹುಂಡಿಯಲ್ಲಿರುವ ‘ತೂಗುದೀಪ ಫಾರ್ಮ್’ಗೆ ಆಗಾಗ ಭೇಟಿ ನೀಡುತ್ತಿದ್ದರು.
ಫಾರ್ಮ್ ಹೌಸ್'ನಲ್ಲಿ 20ಕ್ಕೂ ಹೆಚ್ಚು ರೇಸ್ ಕುದುರೆಗಳು, ಎರಡು ಡಜನ್ ಹಸುಗಳು, ಹಳ್ಳಿಕಾರ್ ಎತ್ತುಗಳು, ಕುರಿ, ಮೇಕೆ, ಇಮು ಪಕ್ಷಿಗಳು, ವಿಶೇಷ ತಳಿಯ ನಾಯಿಗಳು, ಬಾತುಕೋಳಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕಲಾಗುತ್ತಿದೆ.
ಫಾರ್ಮ್ ಹೌಸ್'ನಲ್ಲಿರುವ ಕುದುರೆಗಳು ವಿದೇಶಿ ತಳಿಯದ್ದಾಗಿದ್ದು, ಪ್ರತಿಯೊಂದಕ್ಕೂ ಲಕ್ಷಾಂತರ ರೂಪಾಯಿ ಮೌಲ್ಯವಿದೆ ಎಂದು ಮೂಲಗಳು ತಿಳಿಸಿವೆ.
ತೂಗುದೀಪ ಫಾರ್ಮ್ನ ಮಾಜಿ ಪಶುವೈದ್ಯ ಡಾ. ರಾಮಚಂದ್ರ ಮಾತನಾಡಿ, “ಅಲ್ಲಿನ ರೇಸ್ ಕುದುರೆಗಳು ಅತ್ಯಂತ ಅಮೂಲ್ಯವಾದವು. ಆದರೆ, ದರ್ಶನ್ ಏಕೆ ಅವುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ನನಗೆ ಇಲ್ಲ ಎಂದು ಹೇಳಿದ್ದಾರೆ.
Advertisement