

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಫುಲ್ ಆಕ್ಟಿವ್ ಆಗಿರುವ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಬೆಂಗಳೂರಿನ ರೇಸ್ಕೋರ್ಸ್ ಸಮೀಪದಲ್ಲಿ ಹೊಸ ಕಾಂಗ್ರೆಸ್ ಭವನ ನಿರ್ಮಾಣ ಸ್ಥಳವನ್ನು ಪರಿಶೀಲಿಸಿದರು.
ರೇಸ್ಕೋರ್ಸ್ ಸಮೀಪ ಹೊಸ ಕಾಂಗ್ರೆಸ್ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಸ್ವತಃ ಡಿಕೆ ಶಿವಕುಮಾರ್ ಇಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪ್ರಮಾಣವಚನ ಸಮಾರಂಭದ ನಂತರ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಲ್ಲಿಗೆ ಬಂದು ಶಂಕುಸ್ಥಾಪನೆ ನೆರವೇರಿಸುವಂತೆ ನಾನು ವಿನಂತಿಸುತ್ತಿದ್ದೇನೆ ಮತ್ತು ಸಂಬಂಧ ಇಬ್ಬರಿಗೂ ನಾನು ಆಹ್ವಾನವನ್ನು ಕಳುಹಿಸುತ್ತಿದ್ದೇನೆ" ಎಂದರು.
"ಇದೊಂದು ಐತಿಹಾಸಿಕವಾದಂತಹ ಕಾರ್ಯಕ್ರಮ. ಈ ರೇಸ್ ಕೋರ್ಸ್ ಕಾಂಗ್ರೆಸ್ ಕಚೇರಿಯಲ್ಲಿ ಎರಡು ಕಚೇರಿಯ ಭೂಮಿಪೂಜೆ ಮಾಡಬೇಕು ಅಂತ ಅಂದುಕೊಂಡಿದ್ದೀವಿ. ಈವರೆಗೂ ರಾಹುಲ್ ಗಾಂಧಿಯವರು, ಮಲ್ಲಿಕಾರ್ಜುನ ಖರ್ಗೆಯವರು ಸಮಯ ಖಚಿತಪಡಿಸಿಲ್ಲ" ಎಂದರು.
ಲೋಕಸಭವನದಲ್ಲಿ ಪ್ರಮಾಣ ವಚನ ಮುಗಿಸಿಕೊಂಡು ನೇರವಾಗಿ ಇಲ್ಲಿಗೆ ಬಂದು ಭೂಮಿಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ರಾಜ್ಯದ ಎಲ್ಲಾ ಬ್ಲಾಕ್ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರು, ಫ್ರಂಟ್ ಲೈನ್ ಆರ್ಗನೈಸೇಷನ್ ಚೀಫ್ಸ್, ಎಲ್ಲಾ ಮಾಜಿ ಶಾಸಕರು, ಸಂಸದರು, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ವಿಧಾನಪರಿಷತ್ ಸದಸ್ಯರು ಭಾಗವಹಿಸಬೇಕು. ಆದರೆ, ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಪ್ರಮಾಣವಚನ ಸಮಾರಂಭದ ನೇರ ಪ್ರಸಾರ
ನಮ್ಮ ಕಾರ್ಯಕರ್ತರು ಕ್ಷಮಿಸಬೇಕು. ಪ್ರಮಾಣ ವಚನ ಸಂದರ್ಭದಲ್ಲಿ ಜಾಗ ಇಲ್ಲ. ಕೇವಲ 600 ಅಥವಾ 700 ಜನರಿಗೆ ಮಾತ್ರ ಅಲ್ಲಿ ಅವಕಾಶ ಇದೆ. ಹೀಗಾಗಿ, ಪಕ್ಷದ ಮುಖಂಡರಿಗೆ ಶಂಕು ಸ್ಥಾಪನೆ ನೆರವೇರುವ ಸ್ಥಳಕ್ಕೆ ಆಹ್ವಾನಿಸಲಾಗುತ್ತದೆ. ಪ್ರಮಾಣ ವಚನನೂ ಇಲ್ಲಿಂದಾನೆ ಲೈವ್ ಮಾಡಲಾಗುತ್ತದೆ. ಬಹುಶಃ ರಾಹುಲ್ ಗಾಂಧಿಯವರು ಒಪ್ಪುತ್ತಾರೆ ಅಂದುಕೊಂಡಿದ್ದೇನೆ. ಅವರಿಗೆ ಇನ್ವಿಟೇಷನ್ ಈಗ ಕಳಿಸ್ತಾ ಇದ್ದೀನಿ ಎಂದು ತಿಳಿಸಿದರು.
Advertisement