

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಮಲ-ಮೂತ್ರವನ್ನು ಕೈಯಿಂದ ತೆರವುಗೊಳಿಸಲು ಹೇಳಿದ ಆರೋಪದ ಮೇಲೆ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಆಗಸ್ಟ್ 28ರಂದು ವರದಿಯಾದ ಘಟನೆಗೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಡಾ. ಶಂಕರ್ ಹಿರೇಗೌಡ್ರು ಹಾಗೂ ಸಿಬ್ಬಂದಿ ನರ್ಸ್ ವನಿತಾ ಅವರನ್ನು ಅಮಾನತುಗೊಳಿಸಲಾಗಿದೆ.
ಆಸ್ಪತ್ರೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮಲ ಮತ್ತು ಮೂತ್ರವನ್ನು ಕೈಯಿಂದಲೇ ತೆರವುಗೊಳಿಸುವಂತೆ ಸೂಚಿಸಿದ್ದರು ಎಂದು ಸುದ್ದಿಯಾಗಿತ್ತು.
ಹಾವೇರಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ಮಲದ ಗುಂಡಿಯನ್ನು ಇಬ್ಬರು ರೋಗಿಗಳಿಂದ ಕೈಯಿಂದಲೇ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ ಆರೋಪದ ಹಿನ್ನೆಲೆಯಲ್ಲಿ ವೈದ್ಯರೊಬ್ಬರು ಹಾಗೂ ಹಿರಿಯ ನರ್ಸ್ರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು 2013ರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸವಣೂರು ತಾಲೂಕು ಆಸ್ಪತ್ರೆಗೆ ಸಂಬಂಧಿಸಿದ ವೈದ್ಯಾಧಿಕಾರಿ ಡಾ. ಶಂಕರ್ ವೈ. ಹಿರೇಗೌಡರ್ ಹಾಗೂ ಹಿರಿಯ ನರ್ಸ್ ವನಿತಾ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿದೆ.
ಜಿಲ್ಲಾಡಳಿತವು ಆರೋಗ್ಯಾಧಿಕಾರಿ ಡಾ. ನಾಗರಾಜ್ ಅವರಿಂದಲೂ ವರದಿ ಕೇಳಿದೆ.
ಮಲದ ಗುಂಡಿ ಒಂದೆರಡು ದಿನಗಳಿಂದ ಉಕ್ಕಿ ಹರಿಯುತ್ತಿತ್ತು. ಈ ಬಗ್ಗೆ ಡಾ. ಹಿರೇಗೌಡರ್ ಅವರು ಆಗಸ್ಟ್ 27ರಂದು ನಗರಸಭೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಅವರು ರೋಗಿಗಳನ್ನೇ ಕೈಯಿಂದ ಮಲ ತೆರವುಗೊಳಿಸುವ ಕೆಲಸಕ್ಕೆ ಬಳಸಿಕೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಲದ ಗುಂಡಿಯನ್ನು ಸ್ವಚ್ಛಗೊಳಿಸಿದರೆ ಉತ್ತಮ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡುವುದಾಗಿ ರೋಗಿಗಳಿಗೆ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 28ರಂದು ಆಸ್ಪತ್ರೆ ಆವರಣದಲ್ಲಿದ್ದ ಮಲದ ಗುಂಡಿಯಿಂದ ಉಕ್ಕಿ ಹರಿದ ಮಾನವ ತ್ಯಾಜ್ಯವನ್ನು ರೋಗಿಗಳು ಬಕೆಟ್ಗಳಲ್ಲಿ ಹೊತ್ತೊಯ್ಯುತ್ತಿದ್ದ ದೃಶ್ಯಗಳನ್ನು ಸ್ಥಳೀಯ ನಿವಾಸಿಗಳು ಫೋಟೋ ಹಾಗೂ ವಿಡಿಯೋಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋಗಳು ಹಾಗೂ ಫೋಟೋಗಳು ಇದೀಗ ವೈರಲ್ ಆಗಿವೆ.
ರೋಗಿಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಹಿರೇಗೌಡರ್ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಗುಂಡಿಯನ್ನು ಸ್ವಚ್ಛಗೊಳಿಸಲು ನಗರಸಭೆಯ ವಾಹನ ಕಳುಹಿಸುವಂತೆ ನಿವಾಸಿಗಳಿಗೆ ತಿಳಿಸಿದ್ದಾರೆ.
ಆಗಸ್ಟ್ 30ರಂದು ತಹಶೀಲ್ದಾರ್ ರವಿಕುಮಾರ್ ನಾಗಪ್ಪ ಕೊರವಾರ್ ನೀಡಿದ ದೂರಿನ ಪ್ರಕಾರ, ಶಿಗ್ಗಾಂವಿ ತಾಲೂಕಿನ ಇಬ್ಬರು ಗ್ರಾಮಸ್ಥರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿ ವನಿತಾ ಅವರನ್ನು ಸಂಪರ್ಕಿಸಿದ್ದರು. ಅವರು ಉಕ್ಕಿ ಹರಿಯುತ್ತಿದ್ದ ಶೌಚಾಲಯವನ್ನು ಪರಿಶೀಲಿಸಿ, ಸಮಸ್ಯೆಯ ಕಾರಣ ಪತ್ತೆಹಚ್ಚಿ ಸ್ವಚ್ಛಗೊಳಿಸುವಂತೆ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಆ ಬಳಿಕ ಆ ಇಬ್ಬರು ವ್ಯಕ್ತಿಗಳು ಮಲದ ಗುಂಡಿಯನ್ನು ತೆರೆದು ನೋಡಿದಾಗ ಅದು ಕೊಳಚೆಯಿಂದ ತುಂಬಿರುವುದು ಕಂಡುಬಂದಿದೆ. ಆಸ್ಪತ್ರೆಯೇ ಒದಗಿಸಿದ್ದ ಬಕೆಟ್ಗಳನ್ನು ಬಳಸಿ ಅವರು ತ್ಯಾಜ್ಯವನ್ನು ಹೊರತೆಗೆಯಲು ಆರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.