

ಬೆಂಗಳೂರು: ಮಹಿಳೆಯರ ಶಕ್ತಿ ಮತ್ತು ತ್ಯಾಗಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ಪಾತ್ರವೇ ಶ್ರೇಷ್ಠ ಎಂದು ಬುಧವಾರ ಹೇಳಿದ್ದಾರೆ.
ಇಂದು ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಉಬುಂಟು ಸಂಸ್ಥೆ ಆಯೋಜಿಸಿದ್ದ “ಒಗ್ಗಟ್ಟಾಗಿ ಬೆಳೆಯೋಣ(Together We Grow)” ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, "ರಾಮಾಯಣದಲ್ಲಿ, ಸೀತೆಯ ಪಾತ್ರವು ರಾಮನಿಗಿಂತ ಬಹಳ ದೊಡ್ಡದಾಗಿದೆ. ಅವರ ತ್ಯಾಗ ಮತ್ತು ಹೋರಾಟಗಳು ಇಂದಿನ ಮಹಿಳೆಯರಿಗೆ ಮಾದರಿಯಾಗಿವೆ. ಮಹಿಳೆಯರು ಸೃಷ್ಟಿಕರ್ತರು ಹಾಗೂ ಸವಾಲುಗಳನ್ನು ಮೆಟ್ಟಿ ನಿಂತು ಉದ್ದಿಮೆಯನ್ನು ಕಟ್ಟುವ ಶಕ್ತಿ ಹೊಂದಿದ್ದಾರೆ” ಎಂದರು.
ಗ್ರಾಮ ಪಂಚಾಯಿತಿಗಳಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದ್ದು, ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ ಎಂದು ಸಿಎಂ ತಿಳಿಸಿದರು.
“ನನಗೆ ಯುವಸಮೂಹ ಮತ್ತು ಮಹಿಳೆಯರ ಶಕ್ತಿಯ ಮೇಲೆ ಅಪಾರ ವಿಶ್ವಾಸವಿದೆ. ನಮ್ಮ ಸರ್ಕಾರ 5 ಗ್ಯಾರಂಟಿ ನೀಡುತ್ತಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸುತ್ತಾರೆ. ಈ ಯೋಜನೆಯು ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿಯವರು ಗ್ಯಾರಂಟಿಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.22 ಕೋಟಿ ಮಹಿಳೆಯರಿಗೆ 2000 ರೂ. ದೊರೆಯುತ್ತಿದ್ದು, ಮಹಿಳೆಯರು ಕುಟುಂಬ ನಿರ್ವಹಣೆಗೆ ಆ ಹಣ ನೆರವಾಗಿದೆ” ಎಂದರು.
“ನಮ್ಮ ಸರ್ಕಾರ ಶೇ. 4 ರಷ್ಟು ಬಡ್ಡಿದರದಲ್ಲಿ ಸಾಲಸೌಲಭ್ಯ, ಸಹಾಯಧನ, ಸ್ತ್ರೀಶಕ್ತಿ ಯೋಜನೆ ಸೇರಿದಂತೆ ಅನೇಕ ಮಹಿಳಾ ಆಧರಿತ ಯೋಜನೆಗಳನ್ನು ಜಾರಿಮಾಡಿದೆ. ಪ್ರತಿವರ್ಷ ತಯಾರಾಗುವ ವೈದ್ಯರ ಪೈಕಿ, ಶೇ. 40 ರಷ್ಟು ಮಹಿಳಾ ವೈದ್ಯರಿದ್ದಾರೆ. ನೀವು ಅಡುಗೆಮನೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರು ಉತ್ತಮ ಚಿಂತಕರು ಹಾಗೂ ಉದ್ಯಮಿಗಳು” ಎಂದರು.
“ಉಬುಂಟು ಮೂಲಕ ಸಾವಿರಾರು ಕನಸುಗಳು ಒಂದಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಬೆಳೆಯಬೇಕು. ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಯಾವುದೇ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲಳು ಎನ್ನುವುದು ಈಗಾಗಲೇ ನಿರೂಪಿತವಾಗಿದೆ. ಭಾರತೀಯ ಸಮಾಜದಲ್ಲಿ “ಮೊದಲ ಮಗು ಗಂಡು ಆಗಬೇಕೆನ್ನುವ ಭಾವನೆಯಿದೆ. ಈ ಮಾನಸಿಕ ಸ್ಥಿತಿಯಿಂದ ನಾವು ಹೊರಬರಬೇಕು. ಪೋಷಕರಾಗಿ ನಾವು ಮಕ್ಕಳಲ್ಲಿ ಮೌಲ್ಯಗಳು ಹಾಗೂ ಶಿಸ್ತು ಕಲಿಸಬೇಕು. ತಮ್ಮ ಮಗಳು ಒಬ್ಬ ಸಶಕ್ತ ಮಹಿಳೆಯಾಗಿದ್ದು, ಕುಟುಂಬ ಮತ್ತು ಉದ್ಯಮದ ನಿರ್ವಹಣೆಯಲ್ಲಿ ಯಶ್ವಸಿಯಾಗಿದ್ದಾಳೆ” ಎಂದರು.