

ಬೆಂಗಳೂರು: ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಸ್ ಪಡೆದುಕೊಂಡಿರುವ ಬಗ್ಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚಿಸೋಣ, ಬಿಜೆಪಿ ಸರ್ಕಾರವಿದ್ದಾಗ ಯಡಿಯೂರಪ್ಪನವರ ಕಾಲದಲ್ಲಿ, ಬೊಮ್ಮಾಯಿಯವರ ಕಾಲದಲ್ಲಿ ಏನಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡುತ್ತೇನೆ. ಲಾಲ್ ಬಾಗ್ ನ ಸೌಂದರ್ಯಕ್ಕೆ ಧಕ್ಕೆ ತಪೃರಬೇಕು, ತೊಂದರೆ ಕೊಡಬೇಕು ಎಂಬ ಉದ್ದೇಶ ನನಗಿಲ್ಲ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು,
ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು
ಹಿಂದೆ ಸಿದ್ದರಾಮಯ್ಯನವರು ಸ್ಟೀಲ್ ಬ್ರಿಡ್ಜ್ ಮಾಡುತ್ತೀವಿ ಎಂದಾಗಲೂ ಬಿಜೆಪಿಯವರು ವಿರೋಧಿಸಿದರು. ಅವರು ಅಭಿವೃದ್ಧಿ ವಿರೋಧಿಗಳು. ಬೆಂಗಳೂರಿಗೆ ಏನಾದರೂ ಶಾಪವಿದ್ದರೆ ಬಿಜೆಪಿಯವರೇ ಕಾರಣ. ಅವರ ಕಾಲದಲ್ಲಿ ಗುರುತರ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಬಳಸುವ ಪದ ನಾನು ಉಪಯೋಗಿಸಲು ಇಷ್ಟಪಡುವುದಿಲ್ಲ, ನನಗೆ ಪಕ್ಷ, ರಾಜ್ಯದ ಜನತೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ, ನೀವು ನಿಮ್ಮ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿ ಎಂದು ಪ್ರತಿಪಕ್ಷ ನಾಯಕರಿಗೆ ಹೇಳಲು ಇಚ್ಛಿಸುತ್ತೇನೆ ಎಂದರು.
ಪಾರ್ಕ್ ನ್ನು ಯಾರಾದರೂ ಮಾರಾಟ ಮಾಡುತ್ತೇವೆಯೋ, ನನಗೆ ಇವರಷ್ಟು ಜ್ಞಾನವಿಲ್ಲದಿದ್ದರೂ ಬೇಸಿಕ್ ಕಾಮನ್ ಸೆನ್ಸ್, ಜ್ಞಾನವಿದೆ, ಯಾವ ಯಾವ ಪಾರ್ಕ್ ಗಳಲ್ಲಿರುವ ಜಾಗವನ್ನು ಏನೇನಕ್ಕೆ ಇವರು ಬಿಟ್ಟುಕೊಟ್ಟಿದ್ದಾರೆ ಎಂದು ನಾನು ಪಟ್ಟಿ ಬಿಡುಗಡೆ ಮಾಡಬಲ್ಲೆ ಎಂದು ವಿಪಕ್ಷ ನಾಯಕರಿಗೆ ಸಿಎಂ ತಿರುಗೇಟು ನೀಡಿದರು.
ನಿನ್ನೆ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಭೂಮಿಯ ಶೇ.5ರಷ್ಟು ಭಾಗವನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಪ್ರತಿಪಕ್ಷ ಬಿಜೆಪಿ ಹಾಗೂ ನಾಗರಿಕ ಸಮಾಜದ ಸಂಘಟನೆಗಳಿಂದ ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪ್ರಸ್ತಾವಿತ ಮಸೂದೆಯನ್ನು ಇದೀಗ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಿ, ಜನರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಾಗುವುದು. ಬಳಿಕ ಅಗತ್ಯ ತಿದ್ದುಪಡಿಗಳೊಂದಿಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮತ್ತೆ ಮಂಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ.
1975ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತಂದು, ಸಾರ್ವಜನಿಕ ಉಪಯುಕ್ತತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗಾಗಿ ಉದ್ಯಾನವನದ ಭೂಮಿಯ ಶೇ.5ರಷ್ಟು ಭಾಗದವರೆಗೆ ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುವುದು ಈ ಮಸೂದೆಯ ಉದ್ದೇಶವಾಗಿತ್ತು.