

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮೆಚ್ಚುಗೆಗೆ ಪಾತ್ರರಾದ ಬೆಂಗಳೂರಿನ ಹೊಸಹಳ್ಳಿ ಬೀದಿಬದಿ ವ್ಯಾಪಾರಿ ಟಿಎಸ್ ನಿಂಗಮ್ಮರವರು ಸದ್ಯ ಈದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇತ್ತೀಚಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಬೆಂಗಳೂರಿನ ಬೀದಿ ಬದಿ ವ್ಯಾಪಾರಿ ನಿಂಗಮ್ಮ ಅವರನ್ನು ಹಾಡಿ ಹೊಗಳಿದ್ದರು, ಇದರ ಬೆನ್ನಲ್ಲೇ ನಿಂಗಮ್ಮ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಫುಟ್ಪಾತ್ನಲ್ಲಿ ವ್ಯಾಪಾರ ಮಾಡುತ್ತಿರುವ ನಿಂಗಮ್ಮನಿಗೆ ಜಿಬಿಎ ಅಧಿಕಾರಿಗಳು ವ್ಯಾಪಾರ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಿದ್ದು, ಇಂದು ಅಂಗಡಿ ಹಾಕದಂತೆ ಸೂಚನೆ ನೀಡಿದ್ದಾರೆ.
ಹಾಸನ ಮೂಲದ ನಿಂಗಮ್ಮ ಮತ್ತು ಅವರ ಪತಿ ಸದ್ಯ ಬೆಂಗಳೂರಿನಲ್ಲೇ ನೆಲೆಸಿ, ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿದರು. ಆದರೆ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಂಡವಾಳದ ಅಗತ್ಯವಿತ್ತು.
ನಿಂಗಮ್ಮ ಅವರಿಗೆ ‘ಪಿಎಂ ಸ್ವನಿಧಿ’ ಯಿಂದ ಬೆಂಬಲವೂ ಸಿಕ್ಕಿತು. ಅವರು ತಮ್ಮ ಬಂಡಿಯನ್ನು ನವೀಕರಿಸಿದರು, ದೊಡ್ಡ ಪ್ರಮಾಣದಲ್ಲಿ ಉದ್ಯಮ ಆರಂಭಿಸಿದರು. ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣ ಬಳಿ ಬೀದಿಬದಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಬರುವ ಲಾಭದಿಂದ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಹೊಸಹಳ್ಳಿ ಮೆಟ್ರೋ ಬಳಿ ಫುಟ್ಪಾತ್ನಲ್ಲಿ ವ್ಯಾಪಾರ ಮಾಡುತ್ತಿರುವ ನಿಂಗಮ್ಮ ಅವರಿಗೆ ಬೀದಿ ಬದಿ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿದೆ. ಮೌಖಿಕವಾಗಿ ಜಿಬಿಎ ಅಧಿಕಾರಿಗಳು ನಿಂಗಮ್ಮ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಅಂಗಡಿ ಹಾಕದಂತೆ ಸೂಚಿಸಿದ್ದಾರೆ. ಬೆಂಗಳೂರಿನ ನಿಂಗಮ್ಮ ಅವರ ಕಥೆಯನ್ನು ಪ್ರಧಾನಿಯವರು ಆಗಸ್ಟ್ 30 ರಂದು ಪ್ರಸಾರವಾದ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ್ದು, ಇದು ತುಂಬಾ ಸ್ಪೂರ್ತಿದಾಯಕ ಎಂದು ಶ್ಲಾಘಿಸಿದ್ದರು.
ಇದೀಗ ಜಿಬಿಎ (GBA) ಅಧಿಕಾರಿಗಳು ಬೀದಿ ಬದಿ ವ್ಯಾಪಾರ ನಡೆಸದಂತೆ ಸೂಚನೆ ನೀಡಿದ್ದು, ನಿಂಗಮ್ಮನಿಗೆ ಆತಂಕ ಎದುರಾಗಿದೆ. ಜಿಬಿಎ ಅಧಿಕಾರಿಗಳು ಶುಕ್ರವಾರ ಬಂದು ಹೋಟೆಲ್ ಎತ್ತಿಸಿ ಎಂದಿದ್ದಾರೆ. ಸುಮಾರು 20-25 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಈಗ ಹೋಟೆಲ್ ಎತ್ತಿಸಿ ಅಂದ್ರೇ ಎಲ್ಲಿಗೆ ಹೋಗಬೇಕು? ವಿಷ ಕುಡಿಯಬೇಕು ಅಷ್ಟೇ. ಬೇರೆ ಕಡೆ ಜಾಗ ಗುರುತಿಸಿ ಕೊಡಿ ಅಲ್ಲಿ ಹೋಗಿ ಹೋಟೆಲ್ ಹಾಕಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.