

ಮಡಿಕೇರಿ: ಜನರ ಸಮಸ್ಯೆಗಳನ್ನು ಮರೆತು ಅಧಿಕಾರಕ್ಕೆ ಬರುವುದಕ್ಕಾಗಿ ಮಾತ್ರವೇ ಬಿಜೆಪಿಯವರು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಇಂಧನ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮಾಡಿದರೆ ಸಾಕು ಅಧಿಕಾರಕ್ಕೆ ಬರುತ್ತೇವೆಂದು ಅವರು ಭಾವಿಸಿದ್ದಾರೆ. ಕಾಂಗ್ರೆಸ್ ಈ ಹಿಂದೆ ಪಾದಯಾತ್ರೆ ಮಾಡಿದಾಗ ಜನರಿಗೆ ಸಂಬಂಧಿಸಿದ ವಿಷಯಗಳಿದ್ದವು. ಹಾಗಾಗಿ, ಜನ ಬೆಂಬಲ ನೀಡಿದ್ದರು. ಈಗ ಬಿಜೆಪಿ ಮಾಡುತ್ತಿರುವ ಪಾದಯಾತ್ರೆಯಲ್ಲಿ ಅಧಿಕಾರಕ್ಕೆ ಬರುವುದನ್ನು ಬಿಟ್ಟರೆ ಜನರಿಗೆ ಸಂಬಂಧಿಸಿದ ವಿಷಯಗಳಿಲ್ಲ ಎಂದು ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಜನರ ಸಮಸ್ಯೆಗಳನ್ನು ಚರ್ಚಿಸಲು ನಾವು ವಿಧಾನಸಭೆ ಅಧಿವೇಶನ ಕರೆದಾಗ ಅಲ್ಲಿ ಚರ್ಚೆ ನಡೆಸದೇ ಗಲಾಟೆ ಮಾಡಿದರು. ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಎಂದರು.
ಬಿಜೆಪಿಯವರು ನನ್ನ ಮೇಲೆ ಅನೇಕ ಆರೋಪ ಮಾಡಿದ್ದರು. ಗಣಪತಿ ಆತ್ಮಹತ್ಯೆ, ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣಗಳಲ್ಲಿ ನನ್ನ ವಿರುದ್ಧ ದೂರು ನೀಡಿದ್ದರು. ಆದರೆ, ಅವರ ಬಳಿಯೇ ಇದ್ದ ಸಿಬಿಐ ನನಗೆ ಕ್ಲೀನ್ಚಿಟ್ ನೀಡಿದೆ. ಸುಪ್ರೀಂಕೋರ್ಟ್ನಲ್ಲೂ ನಾನು ತಪ್ಪಿತಸ್ಥ ಅಲ್ಲ ಎಂಬುದು ಸಾಬೀತಾಗಿದೆ. ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧವೂ ಬಿಜೆಪಿ ನಾಯಕರು ಇದೇ ರೀತಿ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.