

ಟಿ. ನರಸೀಪುರ (ಮೈಸೂರು): ಇಡೀ ದೇಶವೇ ಗಣೇಶೋತ್ಸವಕ್ಕೆ ಅದ್ದೂರಿಯಾಗಿ ತಯಾರಾಗುತ್ತಿರುವ ನಡುವೆಯೇ, ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ, ಮಸೀದಿ ಇರೋ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಯುವಕರಿಗೆ ಕಠಿಣ ಎಚ್ಚರಿಕೆ ನೀಡಿರುವ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:
ಇನ್ಸ್ಪೆಕ್ಟರ್ ಹೇಳಿದ್ದೇನು?
ಶಾಂತಿ ಸಭೆಯಲ್ಲಿ ಮಾತನಾಡಿದ ಇನ್ಸ್ಪೆಕ್ಟರ್ ಧನಂಜಯ್, "ಪೊಲೀಸ್ ಇಲಾಖೆ ವತಿಯಿಂದ ನಿಗದಿಪಡಿಸಿ ಹಾಕಿಕೊಡುವ ಮಾರ್ಗದಲ್ಲೇ ಗಣಪತಿ ಮೆರವಣಿಗೆಯನ್ನು ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ನಾವು ಅಲ್ಲಿಗೆ ಹೋಗ್ತೀವಿ, ಇಲ್ಲಿಗೆ ಹೋಗ್ತೀವಿ ಎಂದು ಮಸೀದಿ ಮುಂದೆ ಹೋಗಿ ಪಟಾಕಿ ಸಿಡಿಸುವುದು, ಅಲ್ಲಿಯೇ ಡಿಜೆ ಹಾಕಿ ನಿಲ್ಲಿಸಿ ಜೋರಾಗಿ ಡ್ಯಾನ್ಸ್ ಮಾಡುವುದು ಮಾಡಿದರೆ ಈ ಬಾರಿ ಸುಮ್ಮನೆ ಇರಲ್ಲ. ಕೇವಲ ವಾರ್ನಿಂಗ್ ಕೊಡಲ್ಲ, ನೇರವಾಗಿ ಕಾನೂನು ಕ್ರಮ ಜರುಗಿಸುತ್ತೇನೆ. ಅಕಸ್ಮಾತ್ ನಿಯಮ ಉಲ್ಲಂಘಿಸಿ ಗಲಾಟೆ ಸೃಷ್ಟಿಸಿದರೆ ಗ್ರಹಚಾರ ಬಿಡಿಸಿಬಿಡ್ತೀನಿ, ಹೇಳಲ್ಲ ಮಾಡಿ ತೋರಿಸ್ತೀನಿ," ಎಂದು ಗಣೇಶ ಹಬ್ಬ ಮಾಡುವ ಯುವಕರ ಗುಂಪಿಗೆ ವಾರ್ನಿಂಗ್ ನೀಡಿದ್ದಾರೆ.
ಮುಂದುವರೆದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಅದರಂತೆ, ಹಬ್ಬದ ಸಂದರ್ಭಗಳಲ್ಲಿ ಯಾವುದೇ ಕೋಮು ಸಂಘರ್ಷ ಅಥವಾ ಗಲಾಟೆಗಳು ನಡೆಯದಂತೆ ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳು ಇಂತಹ ಕಠಿಣ ಎಚ್ಚರಿಕೆಗಳನ್ನು ನೀಡುವುದು ಅಗತ್ಯ ಎಂದು ಕೆಲವರು ಸಮರ್ಥಿಸಿಕೊಂಡರೆ, ಹಬ್ಬ ಆಚರಿಸುವ ಭಕ್ತರನ್ನು ಅಪರಾಧಿಗಳಂತೆ ನೋಡಿ ಇಂತಹ ಧಮಕಿ ಹಾಕುವ ಭಾಷೆ ಬಳಸುವುದು ಸರಿಯಲ್ಲ. ಮಸೀದಿಗಳ ಮುಂದೆ ಮೆರವಣಿಗೆ ಹೋಗಬಾರದು ಎಂದು ಬೆದರಿಸುವುದು ಎಷ್ಟು ಸರಿ ಎಂದು ಕೆಲವರು ಇನ್ಸ್ಪೆಕ್ಟರ್ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.