

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಅತಿಯಾದ ಜನದಟ್ಟಣೆ ಮತ್ತು ಸರ್ವರ್ ಡೌನ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಯನ್ನು ತಪ್ಪಿಸಲು ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಪಡಿತರ ಚೀಟಿದಾರರು ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಲು ಹೊಸ ಯೋಜನೆ ಸಿದ್ದಪಡಿಸಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಮೊಬೈಲ್ ಆ್ಯಪ್ ಸೌಲಭ್ಯ
ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲು ಹಾಗೂ ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು, ಇಲಾಖೆಯು ಮುಖ ಗುರುತಿಸುವಿಕೆ (Face Authentication) ಮತ್ತು ಆಧಾರ್ ಒಟಿಪಿ ಬಳಸಿ ಮನೆಯಲ್ಲೇ ಇ-ಕೆವೈಸಿ ಪೂರ್ಣಗೊಳಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಇ-ಕೆವೈಸಿ ಕಡ್ಡಾಯ ಯಾಕೆ?
ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ 5 ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ, ರಾಜ್ಯದ ಸುಮಾರು 2.67 ಕೋಟಿ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನವಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.
ಇ-ಕೆವೈಸಿ ಮಾಡಿಸಲು ಯಾವೆಲ್ಲಾ ದಾಖಲೆಗಳು ಬೇಕು?
ಕುಟುಂಬದ ಸದಸ್ಯರ ಮೂಲ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಂಖ್ಯೆ, ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಹಾಗೂ ಎಲ್ಪಿಜಿ ಗ್ಯಾಸ್ ಸಂಪರ್ಕದ ವಿವರಗಳು (ಜಾತಿ ಪ್ರಮಾಣಪತ್ರ ಕೇವಲ SC/ST ಫಲಾನುಭವಿಗಳಿಗೆ ಮಾತ್ರ).
ಅಕಸ್ಮಾತ್, ಮುಂದೆ ಮೊಬೈಲ್ನಲ್ಲಿ ಇ-ಕೆವೈಸಿ ಮಾಡುವಾಗ ತಾಂತ್ರಿಕ ತೊಂದರೆ ಎದುರಾದರೆ, ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳು ಗುರುತು) ನೀಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.