

ಬೆಂಗಳೂರು ಕೇಂದ್ರ ಕಾರಾಗೃಹ ಅಂದರೆ ಪರಪ್ಪನ ಅಗ್ರಹಾರದಲ್ಲಿ ಸರ್ಕಾರಕ್ಕೆ ಆದಾಯ ತರಲು ಹಾಗೂ ಖೈದಿಗಳು ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ 'ನವ ಸಂಕಲ್ಪ ಬೇಕರಿ' ಎಂಬ ನೂತನ ಬೇಕರಿ ಘಟಕವನ್ನು ಆರಂಭಿಸಲಾಗಿದೆ.
ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ (DGP) ಅಲೋಕ್ ಕುಮಾರ್ ನಿನ್ನೆ ಸೆಪ್ಟೆಂಬರ್ 17ರಂದು ಈ ಬೇಕರಿ ಘಟಕವನ್ನು ಉದ್ಘಾಟಿಸಿದರು. HCL ಫೌಂಡೇಶನ್ ಸಹಯೋಗದೊಂದಿಗೆ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ (ಸಂಚಾರಿ ಬೇಕರಿ) ಸೇವೆಯನ್ನು ಸಹ ಪರಪ್ಪನ ಅಗ್ರಹಾರದ ಗರಿಷ್ಠ ಭದ್ರತಾ ಕಾರಾಗೃಹದಲ್ಲಿ ಆರಂಭಿಸಲಾಗಿದೆ.
ಈ ಸಂಚಾರಿ ಬೇಕರಿ ಮೂಲಕ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಬೆಂಗಳೂರಿನ ವಿವಿಧ ನ್ಯಾಯಾಲಯಗಳ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸೂಚಿಸಲಾಗಿದೆ.
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಶಿಕ್ಷೆಗೊಳಗಾದ ಖೈದಿಗಳಿಗೆ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಡಿಜಿಪಿ ಅಲೋಕ್ ಕುಮಾರ್ ಅವರು ಬೇಕರಿ ಉತ್ಪನ್ನಗಳನ್ನು ಪರಿಶೀಲಿಸಿ, ಅವುಗಳ ರುಚಿ ಮತ್ತು ಗುಣಮಟ್ಟವನ್ನು ಮೆಚ್ಚಿದರು. ಖೈದಿಗಳೊಂದಿಗೆ ಸಂವಾದ ನಡೆಸಿ ಉತ್ಪನ್ನಗಳ ತಯಾರಿಕೆಯಲ್ಲಿ ನೈರ್ಮಲ್ಯ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ಯೋಜನೆಯು ದೇಶದ ಜೈಲಿನಲ್ಲಿ ಸ್ಥಾಪಿಸಲಾದ ಆಧುನಿಕ ಬೇಕರಿ ಘಟಕಗಳಲ್ಲಿ ಒಂದಾಗಿದ್ದು, ಖೈದಿಗಳಲ್ಲಿ ಕೌಶಲ್ಯ ಬೆಳಸುವ ಜೊತೆಗೆ ಅವರ ಭವಿಷ್ಯಕ್ಕೆ ಹೊಸ ಭರವಸೆ ನೀಡುವ ಉದ್ದೇಶ ಹೊಂದಿದೆ.