

ಟಿ. ನರಸೀಪುರ: ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ವಿಚಾರದಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು ಹೊಡೆದ ಹಿಂದೂ ಮಹಾಸಭಾ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಲಿಂಕ್ ರಸ್ತೆಯಲ್ಲೇ ಬೃಹತ್ ಶೋಭಾಯಾತ್ರೆ ನಡೆಸಿದರು. ಬಿಗಿ ಭದ್ರತೆ ಹಾಗೂ ಆತಂಕದ ನಡುವೆ ಶೋಭಾಯಾತ್ರೆ ಶಾಂತಯುತವಾಗಿ ಮುಕ್ತಾಯವಾಯಿತು.
ಮಸೀದಿ ಮುಂಭಾಗ ಪಟಾಕಿ ಸಿಡಿಸುವಂತಿಲ್ಲ ಎಂಬ ಇನ್ಸ್ ಪೆಕ್ಟರ್ ಧನಂಜಯ್ ವಾರ್ನಿಂಗ್ ನ್ನು ಸವಾಲಾಗಿ ಸ್ವೀಕರಿಸಿದ ಕಾರ್ಯಕರ್ತರು, ಮಸೀದಿ ಮುಂಭಾಗ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಜಾನಪದ ಕಲಾತಂಡಗಳ ಜೊತೆಗೆ ಸಾವಿರಾರು ಹಿಂದೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಬಿಜೆಪಿಯ ಪ್ರಮುಖ ನಾಯಕರ ಗೈರಿನ ಮಧ್ಯೆಯೂ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ.
ಹಿಂದೂ ಧ್ವಜ ಬೀಸುವ ಮೂಲಕ ಯುವಕರನ್ನು ಹುರಿದುಂಬಿಸಿದ ಪ್ರತಾಪ್ ಸಿಂಹ: ಮೆರವಣಿಗೆಯಲ್ಲಿ ಪಾಲ್ಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ, ಹಿಂದೂ ಧ್ವಜ ಹಿಡಿದು ಬೀಸುವ ಮೂಲಕ ಯುವಕರನ್ನು ಹುರಿದುಂಬಿಸಿದರು. ಕಾರ್ಯಕರ್ತರೊಂದಿಗೆ ಸೇರಿಕೊಂಡು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಕಿಡಿಕಾರಿದರು.
ಇನ್ನು ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ, ಇನ್ಸ್ಪೆಕ್ಟರ್ ಧನಂಜಯ ಮಸೀದಿ ಮುಂದೆ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಅಂದಲ್ಲ, ಬಾರಪ್ಪ ಈಗ ಬಂದಿದೀವಿ, ಪೊಲೀಸರ ಬಗ್ಗೆ ನಮಗೆ ಗೌರವ ಇದೆ. ಧನಂಜಯ್ ಅವರಂತ ಇನ್ಸ್ಪೆಕ್ಟರ್ ಬಗ್ಗೆ ಗೌರವ ಇಲ್ಲಾ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಲಿಂಕ್ ರಸ್ತೆಯ ಮಸೀದಿ ಮುಂಭಾಗ ಪೊಲೀಸರ ದಂಡು ನೆರೆದಿತ್ತು. ಕೆ.ಎಸ್.ಆರ್.ಪಿ. ತುಕಡಿ ಅರೆಸೇನಾಪಡೆ ಸೇರಿ ಬಿಗ್ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಮಸೀದಿ ಮುಂಭಾಗ ಶಸ್ತ್ರ ಸಜ್ಜಿತ ಪೊಲೀಸರೊಂದಿಗೆ ನಾಲ್ಕು ರಿಸರ್ವ್ ವಾಹನಗಳನ್ನು ಇರಿಸಲಾಗಿತ್ತು.
ಮಸೀದಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದ ಪೊಲೀಸರು ಮಸೀದಿಗೆ ಕಾಣದಂತೆ ರಿಸರ್ವ್ ವಾಹನಗಳನ್ನು ನಿಲ್ಲಿಸಿದ್ದರು. ಖುದ್ದು, ಮೈಸೂರು ಎಸ್ಪಿ ಮಲ್ಲಿಕಾರ್ಜುನ್ ದಂಡಿ ಅವರು ಮಸೀದಿ ಮುಂಭಾಗವೇ ಬೀಡು ಬಿಟ್ಟಿದ್ದರು.