

ದೊಡ್ಡಬಳ್ಳಾಪುರ: ನಗರದ ವಸತಿಗೃಹವೊಂದರಲ್ಲಿ ಮಹಿಳೆ ಮೃತಪಟ್ಟಿದ್ದ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ ಆಕೆಯ ಪತಿ ಆನಂದ್ ಶವ ಪತ್ತೆಯಾಗಿದೆ.
ಅವರ ಸ್ವಂತ ಊರಾದ ಗೌರಿಬಿದನೂರು ತಾಲ್ಲೂಕಿನ ಮುದಗೆರೆ ಗ್ರಾಮದ ಕೆರೆ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಶವ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆಯಷ್ಟೆ ಈತನ ಪತ್ನಿ, ಗೌರಿಬಿದನೂರು ತಾಲ್ಲೂಕಿನ ನಗರಗೆರೆ ನಿವಾಸಿ ವಿದ್ಯಾ (21) ಮೃತಪಟ್ಟಿದ್ದರು. ಪ್ರೀತಿಸಿ ವಿವಾಹವಾಗಿದ್ದ ದಂಪತಿಗೆ ಹೆಣ್ಣು ಮಗು ಇದೆ. ದೊಡ್ಡಬಳ್ಳಾಪುರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸೆ. 15ರಂದು ಬೆಳಿಗ್ಗೆ ವಿದ್ಯಾ ಮತ್ತು ಆನಂದ್ ವಸತಿಗೃಹಕ್ಕೆ ಬಂದಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಕೊಠಡಿಗೆ ತೆರಳಿದ ಕೆಲ ಸಮಯದ ಬಳಿಕ ಆನಂದ್ ಮಾತ್ರ ಹೊರಗೆ ಬಂದಿದ್ದ. ವಿದ್ಯಾ ಅವರ ಮೊಬೈಲ್ ಪೋನ್ ತೆಗೆದುಕೊಂಡ ಆನಂದ್, ಕೊಠಡಿಗೆ ಬೀಗ ಹಾಕಿ ಅಲ್ಲಿಂದ ನೇರವಾಗಿ ಮುದಗೆರೆಗೆ ತೆರಳಿದ್ದ ಎಂದು ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮುತ್ತುರಾಜ್ ತಿಳಿಸಿದ್ದಾರೆ.
ಕೊಠಡಿಯಲ್ಲಿ ವಿದ್ಯಾ ಮೃತದೇಹ ಪತ್ತೆಯಾಗಿದ್ದು, ಅವರ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತು ಕಂಡುಬಂದಿವೆ. ಕಂಪನಿಯ ಗುರುತಿನ ಚೀಟಿಗೆ ಬಳಸುವ ಟ್ಯಾಗ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯಿಂದ ಸತ್ಯ ತಿಳಿಯಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್ ತಿಳಿಸಿದ್ದಾರೆ.