

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರಿನ ಜನತೆಗೆ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆ ಸಮಾಧಾನ ನೀಡಿದ್ದು, ನಗರದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ನಗರವು ತಡರಾತ್ರಿ ಗುಡುಗು ಸಹಿತ ಭಾರಿ ಮಳೆಗೆ ಸಾಕ್ಷಿಯಾಯಿತು. ನಿನ್ನೆ ರಾತ್ರಿಯಿಂದ ಪ್ರಾರಂಭವಾದ ಮಳೆಯ ಆರ್ಭಟ ಇಂದು ಬೆಳಿಗ್ಗೆಯೂ ಮುಂದುವರಿದಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
ರಾಜಧಾನಿಯಾದ್ಯಂತ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ನಿರ್ದಿಷ್ಟವಾಗಿ, ಶಾಂತಿನಗರ, ವಸಂತನಗರ, ಕಾರ್ಪೊರೇಷನ್ ಪ್ರದೇಶ, ಮೆಜೆಸ್ಟಿಕ್, ಕೋರಮಂಗಲ, ಸಿಟಿ ಮಾರ್ಕೆಟ್, ಮಲ್ಲೇಶ್ವರಂ, ಯಶವಂತಪುರ, ಜಯನಗರ, ವಿಜಯನಗರ, ಜೆ.ಪಿ. ನಗರ, ರಾಜಾಜಿನಗರ, ಚಂದ್ರಾಲೇಔಟ್, ನಾಗರಬಾವಿ, ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಮತ್ತು ಹೆಬ್ಬಾಳ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ. ಈ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಇಂದೂ ಕೂಡ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮಳೆ ಕಡಿಮೆಯಾಗಿದೆಯಾದರೂ ಆದರೆ ಹವಾಮಾನ ಇಲಾಖೆಯು ಭಾನುವಾರದಂದು ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ತುಂತುರು ಮಳೆಯಾಗುವ ಮುನ್ಸೂಚನೆ ನೀಡಿದೆ.
ತಾಪಮಾನವು ಸುಮಾರು 21 ಡಿಗ್ರಿ ಸೆಲ್ಸಿಯಸ್ನಿಂದ ಆರಂಭವಾಗಿ ಕ್ರಮೇಣ ಏರಿಕೆಯಾಗಲಿದೆ. ಗರಿಷ್ಠ ತಾಪಮಾನವು 31 ಡಿಗ್ರಿ ಸೆಲ್ಸಿಯಸ್ನಷ್ಟಿರಬಹುದು ಎಂದು ಹೇಳಿದೆ.
ಮಂಗಳವಾರದಿಂದ ಮತ್ತಷ್ಟು ಚುರುಕು!
ಮುಂಗಾರು ದೇಶದ ಕೆಲ ಭಾಗಗಳಿಂದ ಅಧಿಕೃತವಾಗಿ ವಿದಾಯ ಪಡೆಯಲು ಆರಂಭಿಸಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಹವಾಮಾನ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದ್ದು, ಇದರ ಪರಿಣಾಮ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶನಿವಾರ ಸಂಜೆ ವೇಳೆಗೆ ಉತ್ತರ ಅಂಡಮಾನ್ ಸಮುದ್ರ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಪ್ರದೇಶ (Low Pressure Area) ರೂಪುಗೊಳ್ಳುವ ಸಾಧ್ಯತೆ ಇದೆ.
ಈ ಹವಾಮಾನ ವ್ಯವಸ್ಥೆ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿ ಸೋಮವಾರದ ವೇಳೆಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಡಿಪ್ರೆಶನ್ ಆಗಿ ಬಲಗೊಳ್ಳುವ ನಿರೀಕ್ಷೆಯಿದೆ. ಮಂಗಳವಾರದ ವೇಳೆಗೆ ಇದು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಡೀಪ್ ಡಿಪ್ರೆಶನ್ ಆಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಯೆಲ್ಲೋ ಅಲರ್ಟ್
ಬಳಿಕ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಮುಂದುವರಿಯುವ ಈ ವ್ಯವಸ್ಥೆ ಪಶ್ಚಿಮ-ಮಧ್ಯ ಹಾಗೂ ಅದಕ್ಕೆ ಹೊಂದಿಕೊಂಡ ವಾಯವ್ಯ ಬಂಗಾಳಕೊಲ್ಲಿಯತ್ತ ಸಾಗಲಿದ್ದು, ಬುಧವಾರದ ವೇಳೆಗೆ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶ ಕರಾವಳಿ ಸಮೀಪ ತಲುಪುವ ನಿರೀಕ್ಷೆಯಿದೆ.
ಬಂಗಾಳ ಕೊಲ್ಲಿಯಲ್ಲಿ ವೇಗವಾಗಿ ಬಲಗೊಳ್ಳುತ್ತಿರುವ ಈ ಹವಾಮಾನ ವ್ಯವಸ್ಥೆಯಿಂದ ರಾಜ್ಯದ ಒಳನಾಡಿನತ್ತ ಹೆಚ್ಚಿನ ತೇವಾಂಶ ಸೆಳೆಯುವ ಸಾಧ್ಯತೆ ಇದ್ದು, ಇದರಿಂದ ಬಿಸಿಲಿನ ತಾಪಕ್ಕೆ ಕೊಂಚ ಬ್ರೇಕ್ ಬೀಳುವ ನಿರೀಕ್ಷೆಯಿದೆ. ಈಗಾಗಲೇ IMD ರಾಜ್ಯದ ಕರಾವಳಿ ಜಿಲ್ಲೆಗಳು, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.