ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಸಂಕಷ್ಟದ ಸಮಯದಲ್ಲಿ ಆತಂಕ: ನಿಭಾಯಿಸುವುದು ಹೇಗೆ?

ಕೊರೋನಾ ಸೋಂಕಿನ ಆರೋಗ್ಯ ಸಮಸ್ಯೆ, ಆರ್ಥಿಕ ದುಸ್ಥಿತಿ, ಕೆಲಸ ಕಳೆದುಕೊಳ್ಳುವ ಅಥವಾ ಇನ್ನು ಕೆಲವರು ಕೆಲಸ ಕಳೆದುಕೊಂಡು ಭವಿಷ್ಯ ಏನಾಗುತ್ತದೋ ಎಂಬ ಭೀತಿಯಲ್ಲಿ ಹೀಗೆ ಹತ್ತಾರು ಸಮಸ್ಯೆ ಇತ್ತೀಚೆಗೆ ಜನರನ್ನು ಕಾಡುತ್ತಿವೆ.

ಬೆಂಗಳೂರು: ಕೊರೋನಾ ಸೋಂಕಿನ ಆರೋಗ್ಯ ಸಮಸ್ಯೆ, ಆರ್ಥಿಕ ದುಸ್ಥಿತಿ, ಕೆಲಸ ಕಳೆದುಕೊಳ್ಳುವ ಅಥವಾ ಇನ್ನು ಕೆಲವರು ಕೆಲಸ ಕಳೆದುಕೊಂಡು ಭವಿಷ್ಯ ಏನಾಗುತ್ತದೋ ಎಂಬ ಭೀತಿಯಲ್ಲಿ ಹೀಗೆ ಹತ್ತಾರು ಸಮಸ್ಯೆ ಇತ್ತೀಚೆಗೆ ಜನರನ್ನು ಕಾಡುತ್ತಿವೆ. ಜನರಲ್ಲಿ ಆತಂಕ ಬಂದಾಗ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಬರುವುದು ಮತ್ತು ಅದು ಹೆಚ್ಚಾಗುವುದು ಸಾಮಾನ್ಯ.

ಈ ಸಮಯದಲ್ಲಿ ಕೆಲಸ ಮಾಡಲು ಮನಸ್ಸಿರುವುದಿಲ್ಲ, ಅಥವಾ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ಕೊರೋನಾ ಸಮಯದಲ್ಲಿ ಆಗುತ್ತಿರುವ ಆತಂಕಗಳನ್ನು ನಿವಾರಿಸುವುದು, ಸಮಯ, ಪರಿಸ್ಥಿತಿ ಜೊತೆ ಹೊಂದಿಕೊಳ್ಳುವುದು ಹೇಗೆ ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿದೆ.

ನಿಮ್ಮಲ್ಲಿ ಆತಂಕ ಹೆಚ್ಚಿಸುವ ವಿಷಯಗಳೇನು ಎಂದು ತಿಳಿದುಕೊಳ್ಳಿ: ವಿವಿಧ ಪ್ರಚೋದಕಗಳನ್ನು ಮತ್ತು ಅವುಗಳೊಂದಿಗೆ ಸಂಯೋಜಿತವಾಗಿರುವ ಆಲೋಚನಾ ವಿಷಯಗಳೇನು ಎಂದು ತಿಳಿದುಕೊಳ್ಳಿ. ಆಲೋಚನೆ, ಭಾವನೆ ಮತ್ತು ನಡವಳಿಕೆಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಆಲೋಚನೆಗಳನ್ನು ಪ್ರತಿದಿನ ಸ್ವಲ್ಪ ಸಮಯ ಮನನ ಮಾಡಿಕೊಳ್ಳಿ.ಪ್ರತಿಯೊಂದು ಪ್ರಚೋದಕ ಅಥವಾ ಆಲೋಚನಾ ಮಾದರಿಯನ್ನು ನಿಮ್ಮಲ್ಲಿ ಹೊರಹೊಮ್ಮುವ ಭಯ / ಆತಂಕದ ಅನುಗುಣವಾದ ಮಟ್ಟದೊಂದಿಗೆ ಗುರುತಿಸಿಕೊಂಡು ಕ್ರಮೇಣ ಇವುಗಳನ್ನು ನಿವಾರಿಸಲು ವಿಧಾನಗಳನ್ನು ರೂಪಿಸಲು ಪ್ರಯತ್ನಿಸಿ.

ವ್ಯಾಕುಲತೆ ಮತ್ತು ವಿಶ್ರಾಂತಿ ವ್ಯಾಯಾಮದ ಸಹಾಯದಿಂದ ಸ್ಪಷ್ಟತೆಯನ್ನು ಕಂಡುಹಿಡಿಯುವುದು: ಬರೆಯುವುದು, ನಿಮ್ಮಷ್ಟಕ್ಕೆ ಜೋರಾಗಿ ಮಾತನಾಡುವುದು, ಪ್ರೀತಿಪಾತ್ರರು ಮತ್ತು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡುವುದು, ಚಿಕಿತ್ಸಕರೊಂದಿಗೆ ಮಾತನಾಡುವುದರಿಂದ ನಿಮ್ಮ ಆಲೋಚನೆಗಳ ಬಗ್ಗೆ ಸ್ಪಷ್ಟತೆ ಪಡೆಯಬಹುದು.

ಆತಂಕ ಉಂಟುಮಾಡುವ ವಿಷಯಗಳನ್ನು ನಿಧಾನವಾಗಿ ತಟಸ್ಥ ಅಥವಾ ಸಕಾರಾತ್ಮಕ ದೃಷ್ಟಿಕೋನಕ್ಕೆ ಬದಲಾಯಿಸಿ. ಭಯವು ವಿಪರೀತವಾದಾಗ, ಆಲೋಚನೆಗಳ ನಕಾರಾತ್ಮಕ ಸುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಆಗ ವಿಶ್ರಾಂತಿ ಪಡೆಯುವುದು, ವ್ಯಾಯಾಮ ಮಾಡುವುದು, ಯೋಗ ಮಾಡುವುದು, ಧ್ಯಾನ ಮಾಡುವುದು ಇತ್ಯಾದಿಗಳನ್ನು ಮಾಡಿ.

ಸಮುದಾಯದ ಬೆಂಬಲವನ್ನು ಹುಡುಕುವುದು: ನಿಮ್ಮ ಅನುಭವಗಳನ್ನು ಚರ್ಚಿಸಲು ಮತ್ತು ಪರಸ್ಪರ ನಿಭಾಯಿಸುವ ತಂತ್ರಗಳನ್ನು ಹಂಚಿಕೊಳ್ಳಲು ಸಮಾನ ಮನಸ್ಕ ಗುಂಪನ್ನು ರಚಿಸಿ. ಕೆಲವೊಮ್ಮೆ ಯಾರೊಂದಿಗಾದರೂ ಮಾತನಾಡುವುದು ಮತ್ತು ನೀವು ಅನುಭವಿಸುತ್ತಿರುವುದನ್ನು ವಿವರವಾಗಿ ವಿವರಿಸುವುದರಿಂದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ರಚೋದಿಸುವ ವಿಷಯಗಳನ್ನು ನಿರ್ವಹಿಸುವ ಕಲೆ ಸಿದ್ದಿಸಿಕೊಳ್ಳಿ: ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ಇನ್ನಷ್ಟು ಆತಂಕಕ್ಕೀಡು ಮಾಡುವ ವಿಷಯಗಳಿರುತ್ತವೆ. ಭಯವನ್ನು ಹುಟ್ಟಿಸುವ, ಪ್ರಚೋದಿಸುವ ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳಿಂದ ಪ್ರಜ್ಞಾಪೂರ್ವಕವಾಗಿ ದೂರವಿರಲು ಪ್ರಯತ್ನಿಸಿ. ವಿಶ್ವಾಸಾರ್ಹ ಸುದ್ದಿ ಮೂಲಗಳನ್ನು ದಿನಕ್ಕೆ ಒಂದೆರಡು ಬಾರಿ ಪರಿಶೀಲಿಸಿ.

ನಿಮ್ಮ ದಿನಚರಿ ನಿಗದಿಪಡಿಸಿಕೊಳ್ಳಿ: ನಿಮ್ಮ ಗಮನ ಕೇಂದ್ರೀಕರಿಸಲು, ಏಕಾಗ್ರತೆ ಬರಲು, ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುವಂತಹ ಚಟುವಟಿಕೆಗಳನ್ನು ಮಾಡಲು ಹೆಚ್ಚಿನ ಸಮಯವನ್ನು ಕಳೆಯಿರಿ. ಚಿತ್ರಕಲೆ, ಕಸೂತಿ, ಮನೆಯಲ್ಲಿ ಸದಸ್ಯರೆಲ್ಲರೂ ಕೂಡಿ ಸಾಂಪ್ರದಾಯಿಕ ಆಟಗಳನ್ನು ಆಡುವುದು, ಸಾಂಪ್ರದಾಯಿಕ ಅಡುಗೆಯನ್ನು ಸರಳವಾಗಿ ಮಾಡುವುದು, ವ್ಯಾಯಾಮ ಮತ್ತು ಧ್ಯಾನ, ಒತ್ತಡ ಮತ್ತು ಮಾನಸಿಕ ಆಯಾಸವನ್ನು ನಿವಾರಿಸಲು ಯೋಗ, ನೃತ್ಯ, ಸಂಗೀತದ ಮೊರೆ ಹೋಗಿ.

Related Stories

No stories found.

Advertisement

X
Kannada Prabha
www.kannadaprabha.com