CJP Protest LIVE Updates | ಜುಲೈ 20 ಕೇವಲ ಟ್ರೇಲರ್; ಇನ್ನೂ ಲಕ್ಷಾಂತರ ಮಂದಿ ದೆಹಲಿಗೆ ಬರಲಿದ್ದಾರೆ: ಸಿಜೆಪಿ

ದೆಹಲಿ ಸಂಸತ್ ಚಲೋ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಬಳಿ ಸಿಜೆಪಿ (CJP) ಸಂಚಾಲಕ ಅಭಿಜೀತ್ ದೀಪ್ಕೆ ಕ್ಷಮೆಯಾಚಿಸಿದ್ದಾರೆ.
Cockroach Janata Party protest
ಕಾಂಕ್ರೋಚ್ ಜನತಾ ಪಕ್ಷದ ಪ್ರತಿಭಟನೆ
Summary

ಕಾಕ್ರೋಚ್ ಜನತಾ ಪಾರ್ಟಿ (CJP) ಇಂದು ಬುಧವಾರ ಕೂಡ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದು, ಜಂತರ್ ಮಂತರ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸೇರಿದ್ದಾರೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, "ಇನ್ನೂ ಲಕ್ಷಾಂತರ ಮಂದಿ ದೆಹಲಿಗೆ ಆಗಮಿಸಲಿದ್ದಾರೆ" ಎಂದು ಸಿಜೆಪಿ ನಾಯಕ ಆಶುತೋಷ್ ರಾಂಕಾ ಎಚ್ಚರಿಕೆ ನೀಡಿದ್ದಾರೆ.

ಇದೀಗ ಸಂಸತ್ ಭವನ, ರಫಿ ಮಾರ್ಗ್ ಹಾಗೂ ದೆಹಲಿಯ ಇತರೆ ಪ್ರಮುಖ ಪ್ರದೇಶಗಳಲ್ಲಿ ಭಾರೀ ಭದ್ರತೆ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಇದರ ಹಿಂದೆ ದೊಡ್ಡ ಮಟ್ಟದ ಕ್ರಿಮಿನಲ್ ಸಂಚು ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ, ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರತಿಪಕ್ಷದ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ನಡೆದ ಪ್ರತಿಭಟನೆಯ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ಇನ್ನೊಂದೆಡೆ, ಅನಿರ್ದಿಷ್ಟಾವಧಿ ಉಪವಾಸ ಮುಂದುವರಿಸಿರುವ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಮೆದಾಂತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಜೆ.ಪಿ. ನಡ್ಡಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭದ್ರತಾ ಕಾರಣಗಳಿಂದ ದೆಹಲಿಯ ನಾಲ್ಕು ಮೆಟ್ರೋ ನಿಲ್ದಾಣಗಳು ಬಂದ್

ಭದ್ರತಾ ಕಾರಣಗಳಿಂದಾಗಿ ಮಧ್ಯ ದೆಹಲಿಯ ಜನಪಥ್, ರಾಜೀವ್ ಚೌಕ್, ಪಟೇಲ್ ಚೌಕ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ಮೆಟ್ರೋ ನಿಲ್ದಾಣಗಳನ್ನು ಇಂದು ಬೆಳಗ್ಗೆಯಿಂದ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ತಿಳಿಸಿದೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭದ್ರತಾ ಕಾರಣಗಳಿಂದ ಜನಪಥ್, ರಾಜೀವ್ ಚೌಕ್, ಪಟೇಲ್ ಚೌಕ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ಮೆಟ್ರೋ ನಿಲ್ದಾಣಗಳನ್ನು ಮುಂದಿನ ಸೂಚನೆ ಬರುವವರೆಗೆ ಮುಚ್ಚಲಾಗಿದೆ. ಆದರೆ ರಾಜೀವ್ ಚೌಕ್ ಹಾಗೂ ಸೆಂಟ್ರಲ್ ಸೆಕ್ರೆಟೇರಿಯಟ್ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ಸೌಲಭ್ಯ ಲಭ್ಯವಿರುತ್ತದೆ" ಎಂದು ಡಿಎಂಆರ್‌ಸಿ ಎಕ್ಸ್ (X)ನಲ್ಲಿ ಪ್ರಕಟಿಸಿದೆ.

ಸಂಸತ್ ಆವರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ; ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಪ್ರತಿಪಕ್ಷಗಳ ನಾಯಕರು ಬುಧವಾರ ಸಂಸತ್ ಆವರಣದ ಹೊರಭಾಗದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖ ನಾಯಕರಾಗಿದ್ದರು.

ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ), ಎಡಪಕ್ಷಗಳು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ಹಲವು ಪ್ರತಿಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೆಹಲಿ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಪ್ರತಿಭಟನಾಕಾರರು ಭರವಸೆ ಕಳೆದುಕೊಳ್ಳಬೇಡಿ: ದೀಪ್ಕೆ ವಿನಂತಿ

ಸಿಜೆಪಿ ಸಂಚಾಲಕ ಅಭಿಜೀತ್ ದೀಪ್ಕೆ ಮಂಗಳವಾರ ವಿದ್ಯಾರ್ಥಿ ಪ್ರತಿಭಟನಾಕಾರರನ್ನು "ಭರವಸೆ ಕಳೆದುಕೊಳ್ಳಬೇಡಿ" ಎಂದು ವಿನಂತಿಸಿದರು.

"ನೀವು ಭರವಸೆ ಕಳೆದುಕೊಳ್ಳಬೇಕೆಂದು ಸರ್ಕಾರ ಬಯಸುತ್ತೆದೆ. ನಾವು ಭರವಸೆ ಕಳೆದುಕೊಳ್ಳಲು ಸಾಧ್ಯವಿಲ್ಲ. ನಿನ್ನೆ ನಾವು ಅಂತಹ ಮೊದಲ ಸಂದೇಶ ಕರೆ ನೀಡಿದ್ದೇವೆ," ಎಂದು ದೀಪ್ಕೆ ವಿದ್ಯಾರ್ಥಿಗಳಿಗೆ ನೀಡಿದ ಸಂದೇಶದಲ್ಲಿ ಹೇಳಿದರು.

ಗಾಯಗೊಂಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ರಾಹುಲ್, ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ರಾಮ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡಿರುವ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.

ಆರ್‌ಎಂಎಲ್ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಜೆ.ಪಿ. ನಡ್ಡಾ ಸಭೆ

ಸಿಜೆಪಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ ಆರೋಪ: ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಿರಾಕರಣೆ

ಕಾಕ್‌ರೋಚ್ ಜನತಾ ಪಾರ್ಟಿ (CJP)ಯ 'ಸಂಸದ್ ಚಲೋ' ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠ, ಈ ಎಲ್ಲ ವಿಚಾರಗಳಲ್ಲಿ ನ್ಯಾಯಾಲಯವನ್ನು ಎಳೆಯಬೇಡಿ ಎಂದು ಅರ್ಜಿದಾರರಿಗೆ ಛೀಮಾರಿ ಹಾಕಿತು. ಈ ಪ್ರಕರಣದ ವಿಚಾರಣೆಯನ್ನು ನಾಳೆ ಬುಧವಾರಕ್ಕೆ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಪ್ರತಿಭಟನಾ ಸ್ಥಳದಲ್ಲಿ ಕಲ್ಲು ತುಂಬಿದ ಲಾರಿಗಳು ಹೇಗೆ ಬಂದವು?: ಸಿಜೆಪಿ ಸಂಸ್ಥಾಪಕರ ಪ್ರಶ್ನೆ

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಕಲ್ಲು ತುಂಬಿದ ಲಾರಿಗಳು ಹೇಗೆ ಬಂದವು ಎಂದು ಸಿಜೆಪಿ ಸಂಸ್ಥಾಪಕ ಹಾಗೂ ಸಂಚಾಲಕ ಅಭಿಜೀತ್ ದಿಪ್ಕೆ ಪ್ರಶ್ನಿಸಿದ್ದಾರೆ. "ನಿನ್ನೆ ಕಲ್ಲು ತುಂಬಿದ ಆ ಲಾರಿಗಳು ಎಲ್ಲಿಂದ ಬಂದವು? ಇಲ್ಲಿ ದೆಹಲಿ ಪೊಲೀಸರು ಹಕ್ಕಿಯೊಂದು ರೆಕ್ಕೆ ಬಡಿಯುವುದಕ್ಕೂ ಅವಕಾಶ ನೀಡುತ್ತಿಲ್ಲ. ನಮ್ಮ ಪ್ರತಿಯೊಬ್ಬ ಸದಸ್ಯರನ್ನೂ ತಪಾಸಣೆ ಮಾಡಲಾಗುತ್ತಿದೆ. ಅವರ ಬ್ಯಾಗ್‌ಗಳು, ಜೇಬುಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಜನರನ್ನು ಒಳಗೆ ಬಿಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಂತರ್ ಮಂತರ್ ಸುತ್ತ ಕಲ್ಲು ತುಂಬಿದ ಲಾರಿಗಳು ಹೇಗೆ ಬಂದವು?" ಎಂದು ದಿಪ್ಕೆ ಸುದ್ದಿಗಾರರನ್ನು ಪ್ರಶ್ನಿಸಿದರು.

ನಿಮ್ಮನ್ನು ರಕ್ಷಿಸಲು ಇನ್ನಷ್ಟು ಮಾಡಬಹುದಿತ್ತು'; ದೆಹಲಿ ಲಾಠಿ ಚಾರ್ಜ್ ಬಳಿಕ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್

ದೆಹಲಿ ಸಂಸತ್ ಚಲೋ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಬಳಿ ಸಿಜೆಪಿ (CJP) ಸಂಚಾಲಕ ಅಭಿಜೀತ್ ದೀಪ್ಕೆ ಕ್ಷಮೆಯಾಚಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಮ್ಮ ಬೆಂಬಲಿಗರನ್ನು ಸಮರ್ಪಕವಾಗಿ ರಕ್ಷಿಸಲು ತಾನು ಇನ್ನಷ್ಟು ಪ್ರಯತ್ನಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, "ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಲ್ಲೂ, ವಿಶೇಷವಾಗಿ ಪುರುಷ ಪೊಲೀಸ್ ಸಿಬ್ಬಂದಿಯಿಂದ ಕ್ರೂರವಾಗಿ ಹಲ್ಲೆಗೊಳಗಾದ ವಿದ್ಯಾರ್ಥಿನಿಯರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನಿಮ್ಮನ್ನು ಅಮಾನವೀಯವಾಗಿ ನಡೆಸಿಕೊಂಡ ದೆಹಲಿ ಪೊಲೀಸರಿಂದ ರಕ್ಷಿಸಲು ನಾವು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬಹುದಿತ್ತು. ವೈಯಕ್ತಿಕವಾಗಿಯೂ ನಾನು ನಿಮ್ಮನ್ನು ರಕ್ಷಿಸಲು ಇನ್ನಷ್ಟು ಪ್ರಯತ್ನಿಸಬಹುದಿತ್ತು" ಎಂದು ಬರೆದಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿರುವ ಅವರು, "20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವಿಗೆ ಹೊಣೆಗಾರರಾಗಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಇನ್ನೂ ಅನೇಕ ಯುವ ವಿದ್ಯಾರ್ಥಿಗಳ ರಕ್ತ ಹರಿಸಲು ಸಿದ್ಧವಾಗಿತ್ತು" ಎಂದು ಆರೋಪಿಸಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಸಂದೇಶ

ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸಂಪರ್ಕಿಸಲು ಬಯಸುವುದಾಗಿ ದೀಪ್ಕೆ ತಿಳಿಸಿದ್ದಾರೆ.

"ನೀವು ಈ ಘಟನೆಯಲ್ಲಿ ಗಾಯಗೊಂಡಿದ್ದರೆ, ದಯವಿಟ್ಟು ನನಗೆ ಡೈರೆಕ್ಟ್ ಮೆಸೇಜ್ (DM) ಮಾಡಿ. ನಾನು ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಕ್ಷಮೆ ಕೇಳಲು ಬಯಸುತ್ತೇನೆ. ನಿಮ್ಮೆಲ್ಲರ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ" ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದೀಪ್ಕೆ, ವಿದ್ಯಾರ್ಥಿಗಳ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ.

'ನಿಷ್ಪ್ರಯೋಜಕ ಸಭೆಗೆ 4 ಗಂಟೆ ವ್ಯರ್ಥ': ಸಿಜೆಪಿ ವಾಗ್ದಾಳಿ

"ಚಲೋ ಸಂಸತ್" ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ (CJP) ಮುಖಂಡ ಅಶುತೋಷ್ ರಾಂಕಾ, ಆ ಮಾತುಕತೆ "ಸಂಪೂರ್ಣ ನಿರರ್ಥಕವಾಗಿತ್ತು" ಎಂದು ಟೀಕಿಸಿದ್ದಾರೆ "ನಾವು ನಾಲ್ಕು ಗಂಟೆಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಂಡೆವು" ಎಂದು ಹೇಳಿದ್ದಾರೆ.

ನಡ್ಡಾ ಅವರು ಸಿಜೆಪಿ ನಾಯಕರೊಂದಿಗೆ ನಡೆದ ಸಭೆಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಂಕಾ, ನಡ್ಡಾ ಅವರೇ, ಸುಳ್ಳು ಹೇಳಬೇಡಿ. ಈ ಹೋರಾಟದ ಬಲವನ್ನು ಅರಿತಾಗ ನಿಮ್ಮ ಸರ್ಕಾರ ಆತಂಕಕ್ಕೊಳಗಾಯಿತು. ಬಳಿಕ ಯಾವುದೇ ಪ್ರಯೋಜನವಿಲ್ಲದ ಈ ಸಭೆಗೆ ನಮ್ಮ ನಾಲ್ಕು ಗಂಟೆಗಳ ಸಮಯವನ್ನು ವ್ಯರ್ಥ ಮಾಡಿತು ಎಂದು ಆರೋಪಿಸಿದರು.

ಇದೇ ವೇಳೆ, ಸೋಮವಾರ ಸಿಜೆಪಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ತಮ್ಮ ಬೇಡಿಕೆಗಳ ಕುರಿತು ಸರ್ಕಾರದ ಉನ್ನತ ನಾಯಕತ್ವದೊಂದಿಗೆ ಆಂತರಿಕ ಚರ್ಚೆ ನಡೆಸುವುದಾಗಿ ಮತ್ತು ಅದಕ್ಕಾಗಿ ಸ್ವಲ್ಪ ಸಮಯಾವಕಾಶ ನೀಡುವಂತೆ ಜೆ ಪಿ ನಡ್ಡಾ ಭರವಸೆ ನೀಡಿದ್ದಾರೆ ಎಂದು ತಿಳಿಸಿದೆ.

ಸಿಜೆಪಿಯ ಪ್ರಮುಖ ಬೇಡಿಕೆಗಳಲ್ಲಿ ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದೂ ಸೇರಿದೆ.

ಸಂಸತ್ ಚಲೋ ಪ್ರತಿಭಟನೆ ಹಿಂಸಾಚಾರ: ಅಪರಿಚಿತರ ವಿರುದ್ಧ FIR ದಾಖಲು

ದೆಹಲಿಯ ಕನ್ನಾಟ್ ಪ್ಲೇಸ್‌ನ ರೀಗಲ್ ಸಿನಿಮಾ ಸಮೀಪ ನಡೆದ 'ಸಂಸತ್ ಚಲೋ' ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ, ಕಲ್ಲುತೂರಾಟ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಅಭಿಜೀತ್ ದೀಪ್ಕೆ ಬಂಧಿಸಿಲ್ಲ ಎಂದ ದೆಹಲಿ ಪೊಲೀಸ್

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಅಭಿಜೀತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿತ್ತು. ಈ ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಬಂಧನ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಂಧನದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು.

ಹೊಸ ದೆಹಲಿ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಂಡರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಸೌಮ್ಯ ಲಾಠಿ ಚಾರ್ಜ್ ನಡೆಸಿದ್ದು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನಲ್ಲೂ ಮಾರ್ಧನಿಸಿದ CJP ಪ್ರತಿಭಟನೆ, ಉಭಯ ಸದನಗಳ ಕಲಾಪ ಮುಂದೂಡಿಕೆ

ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ ವಿಚಾರ ಇಂದು ಸಂಸತ್ ನಲ್ಲೂ ಮಾರ್ಧನಿಸಿದ್ದು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಈ ಕುರಿತು ಚರ್ಚೆಗೆ ಒತ್ತಾಯಿಸಿದರು.

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಇಂದು ಸಂಸತ್ ನಲ್ಲೂ ಭಾರಿ ಸದ್ದು ಮಾಡಿದ್ದು, ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಭಾರೀ ಗದ್ದಲಕ್ಕೆ ಸಾಕ್ಷಿಯಾಯಿತು.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿದ ಪರಿಣಾಮ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಪದೇ ಪದೇ ಅಡಚಣೆಗೆ ಒಳಗಾಗಿ, ಅಂತಿಮವಾಗಿ ಮಂಗಳವಾರದವರೆಗೆ ಮುಂದೂಡಲಾಯಿತು.

'ದೇಶದ ಇತಿಹಾಸದಲ್ಲೇ ಯುವಜನ ವಿರೋಧಿ ಪ್ರಧಾನಿ ಮೋದಿ' : CJP Protest ವಿಚಾರವಾಗಿ ರಾಹುಲ್ ಗಾಂಧಿ ವಾಗ್ದಾಳಿ

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಭಾರತದ ಇತಿಹಾಸದಲ್ಲೇ ನರೇಂದ್ರ ಮೋದಿ ಅತ್ಯಂತ ಯುವಜನ ವಿರೋಧಿ ಪ್ರಧಾನಮಂತ್ರಿ" ಎಂದು ಆರೋಪಿಸಿದ ಅವರು, "ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳಿಗೆ ಉತ್ತರಗಳ ಬದಲು ಲಾಠಿ ಪೆಟ್ಟು ಮತ್ತು ಬಂಧನ ಸಿಗುತ್ತಿದೆ" ಎಂದು ಟೀಕಿಸಿದರು.

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಜೊತೆಗೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಕೂಡ ಪ್ರಧಾನಿ ಮೋದಿ ಸಿದ್ಧರಿಲ್ಲ ಎಂದು ಕಿಡಿಕಾರಿದರು.

'ಪ್ರತಿಭಟನಾಕಾರರ ಮೇಲೆ ಕಣ್ಗಾವಲು? ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿದ್ದೀರಾ?': ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿರುವವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, "ಸುಪ್ರೀಂ ಕೋರ್ಟ್ ನೀಡಿರುವ ಕಣ್ಗಾವಲು ಮಾರ್ಗಸೂಚಿಗಳನ್ನು ದೆಹಲಿ ಪೊಲೀಸರು ಪಾಲಿಸಿದ್ದಾರೆಯೇ?" ಎಂದು ಪ್ರಶ್ನಿಸಿದೆ.

2017ರಲ್ಲಿ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಗೌಪ್ಯತೆಯ ಹಕ್ಕು (Right to Privacy) ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಘೋಷಿಸಿತ್ತು. ಅಲ್ಲದೆ, ಸರ್ಕಾರದ ಯಾವುದೇ ರೀತಿಯ ಕಣ್ಗಾವಲು ಕಾನೂನುಬದ್ಧ, ಅಗತ್ಯ ಮತ್ತು ಉದ್ದೇಶಕ್ಕೆ ಅನುಗುಣ (Proportionate) ಆಗಿರಬೇಕು ಎಂಬ ತತ್ವವನ್ನೂ ಪ್ರತಿಪಾದಿಸಿತ್ತು.

ಈ ಹಿನ್ನೆಲೆಯಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜೂನ್ 20ರಿಂದ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಆರಂಭವಾದ ಬಳಿಕ ಪ್ರತಿಭಟನಾಕಾರರ ಮೇಲೆ ನಿರಂತರವಾಗಿ ಫೋಟೋ, ವಿಡಿಯೊ ಚಿತ್ರೀಕರಣ ನಡೆಸಲಾಗುತ್ತಿದೆ. ಅಲ್ಲದೆ, ಶಾಶ್ವತ ಕಣ್ಗಾವಲು ಗೋಪುರದ (Surveillance Tower) ಮೂಲಕ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಮೋದಿ ಅತ್ಯಂತ ಯುವ ವಿರೋಧಿ ಪ್ರಧಾನಿ: ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್- ರಾಹುಲ್ ಗಾಂಧಿ ಖಂಡನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ದೇಶದ ಇತಿಹಾಸದಲ್ಲಿ "ಅತ್ಯಂತ ಯುವ ವಿರೋಧಿ" ಪ್ರಧಾನಿ ಎಂದು ಕರೆದಿದ್ದಾರೆ. ಸರ್ಕಾರವು ಯುವಕರನ್ನು ವಿಫಲಗೊಳಿಸಿದ್ದು ಮಾತ್ರವಲ್ಲದೆ ಅವರ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.

"ಪ್ರಧಾನಿ ಮೋದಿ ಭಾರತದ ಇತಿಹಾಸದಲ್ಲಿ 'ಅತ್ಯಂತ ಯುವ ವಿರೋಧಿ ಪ್ರಧಾನಿ - ಅವರು ಎಷ್ಟು 'ಯುವ ವಿರೋಧಿ' ಎಂದರೆ ವಿಫಲ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ." ಎಂದು ಹೇಳಿದ್ದಾರೆ.

"152 ಪ್ರಶ್ನೆಪತ್ರಿಕೆ ಸೋರಿಕೆ. 7.5 ಕೋಟಿ ವಿದ್ಯಾರ್ಥಿಗಳು ಬಲಿಪಶುಗಳಾಗಿದ್ದರು. ಮತ್ತು ಒಬ್ಬನೇ ಒಬ್ಬ ತಪ್ಪಿತಸ್ಥನಿಗೆ ಶಿಕ್ಷೆಯಾಗಿಲ್ಲ. ಯಾರಿಗೆ ಶಿಕ್ಷೆಯಾಯಿತು? ಶ್ರಮಶೀಲ ಯುವಕರಿಗೆ," ಎಂದು ಅವರು X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

"ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಅಪರಾಧಿಗಳು ಮುಕ್ತವಾಗಿ ಸುತ್ತಾಡುತ್ತಿದ್ದಾರೆ - ಮತ್ತು ಸಮಸ್ಯೆಗಳನ್ನು ಎತ್ತುವ ವಿದ್ಯಾರ್ಥಿಗಳನ್ನು ಎಳೆಯಲಾಗುತ್ತಿದೆ, ಹೊಡೆಯಲಾಗುತ್ತಿದೆ. ಈ ಸರ್ಕಾರವು ಯುವಕರನ್ನು ವಿಫಲಗೊಳಿಸುತ್ತಿಲ್ಲ - ಅದು ಅವರ ಮೇಲೆ ದಾಳಿ ಮಾಡುತ್ತಿದೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.

ಸಂಸತ್ತಿನ ರಸ್ತೆಯ ಡ್ರೋನ್ ದೃಶ್ಯಾವಳಿಗಳ ಬಗ್ಗೆ ತನಿಖೆ- ದೆಹಲಿ ಪೊಲೀಸ್

ಸಂಸತ್ತಿನ ರಸ್ತೆಯಲ್ಲಿ ಪ್ರತಿಭಟನಾಕಾರರು ಸೇರಿದ್ದಾರೆಂದು ಹೇಳಲಾದ ವೈರಲ್ ಡ್ರೋನ್ ವೀಡಿಯೊ ಕುರಿತು ದೆಹಲಿ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಅನಧಿಕೃತ ಡ್ರೋನ್ ಕಾರ್ಯಾಚರಣೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದರು.

"ವಿಡಿಯೋದ ಸತ್ಯಾಸತ್ಯತೆ ಮತ್ತು ಡ್ರೋನ್ ಕಾರ್ಯಾಚರಣೆಯ ಸಂದರ್ಭಗಳನ್ನು ಪರಿಶೀಲಿಸಲಾಗುತ್ತಿದೆ. ಅನ್ವಯವಾಗುವ ಕಾನೂನುಗಳು ಮತ್ತು ಡ್ರೋನ್ ನಿಯಮಗಳ ಈ ಉಲ್ಲಂಘನೆಗಾಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಡ್ರೋನ್ ದೃಶ್ಯಾವಳಿಗಳು ಕಾಣಿಸಿಕೊಂಡ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವದೆಹಲಿ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಡ್ರೋನ್‌ಗಳನ್ನು ಹಾರಿಸಲು ಪೂರ್ವಾನುಮತಿ ಕಡ್ಡಾಯವಾಗಿದೆ ಮತ್ತು ನಿಗದಿತ ನಿಯಮಗಳ ಯಾವುದೇ ಉಲ್ಲಂಘನೆಯು ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಂತರ್ ಮಂತರ್ ಅನ್ನು ಬಲಪ್ರಯೋಗದಿಂದ ತೆರವುಗೊಳಿಸಲಾಗಿದೆ- ಸಿಜೆಪಿ ಹೇಳಿಕೆ

'ನಾನು ನನ್ನ ಉಪವಾಸ ಮುಂದುವರಿಸುತ್ತೇನೆ': ಸೋನಮ್ ವಾಂಗ್ಚುಕ್

ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯ: ಪಿಟಿಐ

ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಕಲ್ಲು ತೂರಾಟ- ಸಿಜೆಪಿ ಆರೋಪ

ಧರಣಿ ಅಂತ್ಯಗೊಳಿಸುವಂತೆ ಸಿಜೆಪಿ ಪ್ರತಿಭಟನಾಕಾರಿಗೆ ನಡ್ಡಾ ಒತ್ತಾಯ; 'ಸೌಹಾರ್ದಯುತ ವಾತಾವರಣ'ದಲ್ಲಿ ಚರ್ಚೆ

ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಚರ್ಚೆಗಳು ಬೆಳಿಗ್ಗೆ 11.50 ಕ್ಕೆ ಪ್ರಾರಂಭವಾದವು ಮತ್ತು "ಸೌಹಾರ್ದಯುತ ವಾತಾವರಣ"ದಲ್ಲಿ ನಡೆದವು ಎಂದು ನಡ್ಡಾ ಹೇಳಿದರು. ವಿವರವಾದ ಮೌಖಿಕ ಚರ್ಚೆಯ ನಂತರ, ಸಿಜೆಪಿ ನಿಯೋಗವು ಸಂಜೆ 4 ಗಂಟೆ ಸುಮಾರಿಗೆ ಅವರಿಗೆ ಲಿಖಿತ ಜ್ಞಾಪಕ ಪತ್ರವನ್ನು ಸಲ್ಲಿಸಿತು ಎಂದು ಅವರು ಹೇಳಿದರು.

"ಎಲ್ಲಾ ಪ್ರತಿಭಟನಾಕಾರರು ತಮ್ಮ ಧರಣಿ ಅಂತ್ಯಗೊಳಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಆಡಳಿತಕ್ಕೆ ಸಹಾಯ ಮಾಡಲು ನಾನು ವಿನಂತಿಸಿದ್ದೇನೆ" ಎಂದು ನಡ್ಡಾ ಹೇಳಿದರು.

ಜೆಪಿ ನಡ್ಡಾ ಅವರೊಂದಿಗಿನ ಭೇಟಿಯ ಫೋಟೋ ಹಂಚಿಕೊಂಡ ಸಿಜೆಪಿ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಅವರು ಕೇಂದ್ರ ಸಚಿವ ಮತ್ತು ಬಿಜೆಪಿ ಮಾಜಿ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗಿನ ಭೇಟಿಯ ಫೋಟೋವನ್ನು ಪೋಸ್ಟ್ ಮಾಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ ಅಥವಾ ವಜಾಗೊಳಿಸುವಿಕೆ ಸೇರಿದಂತೆ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ತಿಳಿಸಲಾಗಿದೆ ಎಂದು ಹೇಳಿದರು.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ದಾಸ್, ಬೇಡಿಕೆಗಳನ್ನು "ಸೂಕ್ತ ಮಟ್ಟದಲ್ಲಿ" ಚರ್ಚಿಸಲಾಗುವುದು ಎಂದು ನಡ್ಡಾ ಭರವಸೆ ನೀಡಿದ್ದಾರೆ ಎಂದು ಹೇಳಿದರು, ಆದರೆ ಇಲ್ಲಿಯವರೆಗೆ ಯಾವುದೇ ಭರವಸೆಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.

"ಬೇಡಿಕೆ ಈಡೇರುವವರೆಗೂ ಶಾಂತಿಯುತ ಪ್ರತಿಭಟನಾಕಾರರು ವಿಶ್ರಾಂತಿ ಪಡೆಯುವುದಿಲ್ಲ" ಎಂದು ದಾಸ್ ತಿಳಿಸಿದ್ದಾರೆ.

ಅಭಿಜಿತ್ ದಿಪ್ಕೆ ಬಂಧನದ ವರದಿ ನಿರಾಕರಿಸಿದ ಪೊಲೀಸರು

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರನ್ನು ಪಕ್ಷದ 'ಚಲೋ ಸಂಸದ್' ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳನ್ನು ದೆಹಲಿ ಪೊಲೀಸರು ಸೋಮವಾರ ತಳ್ಳಿಹಾಕಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ವರದಿಗಳು "ಸಂಪೂರ್ಣವಾಗಿ ಸುಳ್ಳು" ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

"ಅಭಿಜಿತ್ ದಿಪ್ಕೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುವ ದಾರಿತಪ್ಪಿಸುವ ವರದಿಗಳು ಪ್ರಸ್ತುತ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುತ್ತಿವೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಅವರು ವೇದಿಕೆಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಪ್ರತಿಭಟನೆಯ ಸಮಯದಲ್ಲಿ ದೀಪಕೆ ಅವರನ್ನು ಪೊಲೀಸರು "ಕರೆದುಕೊಂಡು ಹೋಗಿದ್ದಾರೆ" ಎಂದು ಸಿಜೆಪಿ ನಾಯಕರು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡ ನಂತರ ಈ ಸ್ಪಷ್ಟೀಕರಣ ಬಂದಿದೆ.

ಪ್ರಮುಖ ಸ್ಥಳಗಳಲ್ಲಿ ಹಲವಾರು ಪ್ರತಿಭಟನಾಕಾರರ ಬಂಧನ

ನವದೆಹಲಿಯಾದ್ಯಂತ ಸೋಮವಾರ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಂಡಿ ಹೌಸ್, ಪಟೇಲ್ ಚೌಕ್, ಜನಪಥ್, ಜಂತರ್ ಮಂತರ್, ಪಾರ್ಲಿಮೆಂಟ್ ಸ್ಟ್ರೀಟ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಅಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳು ಮತ್ತು ನಿಷೇಧಾಜ್ಞೆಗಳು ಜಾರಿಯಲ್ಲಿದ್ದರೂ ಪ್ರತಿಭಟನಾ ಗುಂಪುಗಳು ಸೇರಲು ಪ್ರಯತ್ನಿಸಿದವು ಎಂದು ಅವರು ಹೇಳಿದರು.

ಸಂಸತ್ತಿನ ಸಮೀಪವಿರುವ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಕನಿಷ್ಠ ಏಳು ಜನರನ್ನು ಬಂಧಿಸಲಾಗಿದೆ.

ಬಂಧಿತರನ್ನು ನವದೆಹಲಿಯಾದ್ಯಂತ ವಿವಿಧ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ, ಅವರು ಮತ್ತೆ ಗುಂಪುಗೂಡುವುದನ್ನು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸುವುದನ್ನು ತಡೆಯಲು ಪ್ರತಿಭಟನಾ ಸ್ಥಳದಿಂದ ದೂರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಚ್ಚರಿಕೆ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ, ಪೊಲೀಸರು ಬಂಧನಕ್ಕೊಳಗಾದವರ ಪೂರ್ವಾಪರಗಳನ್ನು ಪರಿಶೀಲಿಸುತ್ತಾರೆ ಮತ್ತು ಅವರಲ್ಲಿ ಯಾರಾದರೂ ಹಿಂದಿನ ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕತ್ವದೊಂದಿಗೆ ಬೇಡಿಕೆಗಳ ಕುರಿತು ಚರ್ಚಿಸಲು ಸಮಯ ಕೇಳಿದ ಜೆಪಿ ನಡ್ಡಾ

ಸಿಜೆಪಿ ನಾಯಕ ಅಶುತೋಷ್ ರಾಂಕಾ ಮತ್ತು ಪಕ್ಷದ ವಕ್ತಾರರು ಕೇಂದ್ರ ಸಚಿವ ನಡ್ಡಾ ಅವರನ್ನು ಭೇಟಿಯಾಗಿದ್ದರು. ಬೇಡಿಕೆಗಳ ಕುರಿತು ಬಿಜೆಪಿ ಪಕ್ಷದ ನಾಯಕತ್ವದೊಂದಿಗೆ ಸಮಾಲೋಚಿಸಲು ನಡ್ಡಾ ಸಮಯ ಕೋರಿರುವುದಾಗಿ ಅವರು ಹೇಳಿದರು.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಂಕಾ, ಮೂರು ಪ್ರಮುಖ ಬೇಡಿಕೆಗಳ ಕುರಿತು "ಅವರ ನಾಯಕತ್ವದೊಂದಿಗೆ ಚರ್ಚಿಸಲು" ಸಮಯ ಕೋರಿದ್ದಾರೆ ಎಂದು ಹೇಳಿದರು. ಬೇಡಿಕೆಗಳು ಇಂತಿವೆ:

  • ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರ ತಕ್ಷಣದ ಬಿಡುಗಡೆ

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ

  • ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ

ಸಿಜೆಪಿ ನಾಯಕರಿಂದ ಜೆಪಿ ನಡ್ಡಾ ಭೇಟಿ; ಬೇಡಿಕೆಗಳ ಪಟ್ಟಿ ಸಲ್ಲಿಕೆ

ಸಿಜೆಪಿ ವಕ್ತಾರ ಸೌರವ್ ದಾಸ್ ಸೋಮವಾರ ತಾವು ಮತ್ತು ಪಕ್ಷದ ನಾಯಕ ಅಶುತೋಷ್ ರಂಕಾ ಅವರು ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂಘಟನೆಯ ಬೇಡಿಕೆಗಳನ್ನು ವಿವರಿಸುವ ಲಿಖಿತ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾಯ್ದ ನಂತರ ಸಭೆ ಸುಮಾರು 10 ನಿಮಿಷಗಳ ಕಾಲ ನಡೆಯಿತು ಎಂದು ದಾಸ್ ಹೇಳಿದರು.

"ಅಶುತೋಷ್ ರಂಕಾ ಮತ್ತು ನಾನು ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ 10 ನಿಮಿಷಗಳ ಕಾಲ ಭೇಟಿಯಾದೆವು. ನಮ್ಮ ಬೇಡಿಕೆಗಳೊಂದಿಗೆ ನಾವು ಲಿಖಿತ ಪತ್ರವನ್ನು ಸಲ್ಲಿಸಿದ್ದೇವೆ, ಆದರೆ ಅವರು ಈ ಮಧ್ಯೆ ಆಂತರಿಕವಾಗಿ ಮಾತನಾಡುವುದಾಗಿ ನಮಗೆ ಭರವಸೆ ನೀಡಿದ್ದಾರೆ." ಎಂದು ದಾಸ್ ಹೇಳಿದ್ದಾರೆ.

ಸಂಸ್ಥಾಪಕ ಅಭಿಜೀತ್ ದೀಪ್ಕೆ ವಶಕ್ಕೆ ಪಡೆದ ಪೊಲೀಸರು: ಸಿಜೆಪಿ ಹೇಳಿಕೆ

ಜಂತರ್ ಮಂತರ್ ಬಳಿ ಸಿಜೆಪಿ ಪಕ್ಷದ 'ಚಲೋ ಸಂಸದ್' ಪ್ರತಿಭಟನೆಯ ಸಂದರ್ಭದಲ್ಲಿ ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಕಾರ್ಟೋಚ್ ಜನತಾ ಪಕ್ಷ (ಸಿಜೆಪಿ) ಹೇಳಿಕೊಂಡಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ದೀಪ್ಕೆ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಹೇಳಿದ್ದು, ಪ್ರತಿಭಟನಾಕಾರರನ್ನು ಬೆಂಬಲಿಸುವಂತೆ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾರೆ.

"ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ! ರಸ್ತೆಗಳಲ್ಲಿ ಬೆಂಬಲವಾಗಿ ನಿಲ್ಲುವಂತೆ ನಾವು ಎಲ್ಲಾ ಸಂಸದರನ್ನು ವಿನಂತಿಸುತ್ತೇವೆ!" ಎಂದು ದಾಸ್ ಬರೆದಿದ್ದಾರೆ.

ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಈ ಬೆಳವಣಿಗೆಯನ್ನು ದೃಢಪಡಿಸಿದೆ, "ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಜಂತರ್ ಮಂತರ್‌ನಿಂದ ಪೊಲೀಸರು ಕರೆದೊಯ್ದಿದ್ದಾರೆ" ಎಂದು ಪೋಸ್ಟ್ ಮಾಡಿದೆ.

ದೆಹಲಿ ಪೊಲೀಸರು ಇನ್ನೂ ಬಂಧನದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

'ಸಾಯುವ ಮುನ್ನವೇ ಸಾಯಲು ನನಗೆ ಇಷ್ಟವಿಲ್ಲ': CJP ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಕುರಿತು ಪ್ರಕಾಶ್ ರಾಜ್

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಯ (CJP) ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಭಾನುವಾರ ಪಾಲ್ಗೊಂಡರು ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸಿ ಆ ರಾತ್ರಿಯನ್ನು ಅಲ್ಲೇ ಕಳೆದರು. ಮರುದಿನ ಬೆಳಿಗ್ಗೆಯೂ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತ್ಯವನ್ನು ಹೇಳಲು ತಮಗೆ ಭಯವಿಲ್ಲ. 'ಸಾಯುವ ಮುನ್ನವೇ ನಾನು ಸಾಯಲು ಬಯಸುವುದಿಲ್ಲ' (ಮುಕ್ತವಾಗಿ ಮಾತನಾಡಲು ಅಥವಾ ತಾನು ನಂಬಿದ ವಿಷಯಗಳ ಪರವಾಗಿ ನಿಲ್ಲಲು ಸಾಧ್ಯವಾಗದಿರುವ ಜೀವನವು, ಬದುಕಿದ್ದರೂ 'ಸತ್ತಂತೆ') ಎಂದು ಹೇಳಿದರು.

'ಸಂಸತ್ ಚಲೋ' ನಂತರವೂ ಉಪವಾಸ ಅಂತ್ಯಗೊಳಿಸಲ್ಲ; ಸತ್ಯಾಗ್ರಹ ಹಿಂಪಡೆಯಲು 3 ಷರತ್ತು ವಿಧಿಸಿದ ವಾಂಗ್‌ಚುಕ್!

'ಅಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವಾಗ, ಲಾಠಿ ಚಾರ್ಜ್‌ಗೆ ಕಾರಣವೇನು?’: ಶಶಿ ತರೂರ್ ಪ್ರಶ್ನೆ

ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆಯೇ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಪ್ರಶ್ನಿಸಿದ್ದಾರೆ. “ಅಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವಾಗ, ಲಾಠಿ ಚಾರ್ಜ್‌ಗೆ ಕಾರಣವೇನು? ಲಾಠಿ ಚಾರ್ಜ್ ಅಹಿಂಸಾ ಕೃತ್ಯವಲ್ಲ. ಇದು ಹಿಂಸಾಚಾರದ ಕೃತ್ಯ. ಇದರ ತರ್ಕ ನನಗೆ ಅರ್ಥವಾಗುತ್ತಿಲ್ಲ,” ಎಂದು ತರೂರ್ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಸತ್ತಿನ ಸಮೀಪದ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಕನಿಷ್ಠ ಏಳು ಸಿಜೆಪಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ

ಸಿಜೆಪಿ ಪ್ರತಿಭಟನೆಯ ನಡುವೆ ಸಂಸತ್ತಿನ ಆವರಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ

ಸಿಜೆಪಿಯ 'ಚಲೋ ಸಂಸದ್' ಕರೆಯ ಮೇರೆಗೆ, ಸಂಸತ್ತಿನ ಆವರಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಇದು ಯುದ್ಧ ವಲಯವೇ?': ಅಶ್ರುವಾಯು ಶೆಲ್‌ಗಳನ್ನು ಬಳಸುತ್ತಿರುವ ದೃಶ್ಯಗಳನ್ನು ಹಂಚಿಕೊಂಡ ಸಿಜೆಪಿ

ಸಿಜೆಪಿ ಪ್ರತಿಭಟನೆಯ ನಡುವೆಯೇ ಅಮಿತ್ ಶಾ ಭೇಟಿಯಾದ ಧರ್ಮೇಂದ್ರ ಪ್ರಧಾನ್

ಪರೀಕ್ಷಾ ಅಕ್ರಮಗಳ ಆರೋಪದ ಮೇಲೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ)ಯ ಸಾವಿರಾರು ಜನರು ಸಂಸತ್ತಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿರುವ ನಡುವೆ, ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾದರು.

ಶಾ ಅವರು ಸಂಸತ್ ಭವನದ ಸಂಕೀರ್ಣದಲ್ಲಿರುವ ಪ್ರಧಾನ್ ಅವರ ಕಚೇರಿಯಲ್ಲಿ ಭೇಟಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ಏನಾಯಿತು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸಿಜೆಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ.

ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ

ಸಂಸತ್ತಿನತ್ತ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ದೆಹಲಿಯ ಪ್ರೆಸ್ ಕ್ಲಬ್, ಶಾಸ್ತ್ರಿ ಭವನ ಮತ್ತು ಕಾನ್ಸ್ಟಿಟ್ಯೂಷನ್ ಕ್ಲಬ್ ಬಳಿ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದವು.

ಕೇಂದ್ರ ಸಚಿವ ಜೆಪಿ ನಡ್ಡಾ ಭೇಟಿ ಮಾಡಲಿರುವ ಸಿಜೆಪಿ ವಕ್ತಾರರು

ಸಂಸತ್ತಿಗೆ ಮೆರವಣಿಗೆ ನಡೆಸುವ ಯೋಜನೆಯ ನಡುವೆ ಸರ್ಕಾರ ಅವರನ್ನು ಸಂಪರ್ಕಿಸಿದ ನಂತರ, ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ಹೊರಟಿದ್ದೇವೆ ಎಂದು ಕಾಕ್ರೋಚ್ ಜನತಾ ಪಕ್ಷದ ವಕ್ತಾರರು ಸೋಮವಾರ ತಿಳಿಸಿದ್ದಾರೆ.

“ಬೆಳಿಗ್ಗೆ 11:52 ಗಂಟೆ. ಕಾಕ್ರೋಚ್ ಜನತಾ ಪಕ್ಷದ ಪರವಾಗಿ ನಾನು ಮತ್ತು ಅಶುತೋಷ್ ರಾಂಕಾ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ಹೊರಟಿದ್ದೇವೆ. ಸರ್ಕಾರ ಬೆಳಿಗ್ಗೆ ಮಾತುಕತೆಗಾಗಿ ಪ್ರಸ್ತಾಪ ಮಾಡಿತ್ತು. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಯುವಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ನಾವು ಗೆಲ್ಲುತ್ತೇವೆ!” ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾಕಾರರು ಸಂಸತ್ ಕಡೆಗೆ ಮೆರವಣಿಗೆಗೆ ಯತ್ನ; ಪೊಲೀಸರಿಂದ ಲಾಠಿ ಚಾರ್ಜ್

ಸೋಮವಾರ ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಸಾವಿರಾರು ಜನ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದ ನಂತರ, ಪಾರ್ಲಿಮೆಂಟ್ ಸ್ಟ್ರೀಟ್ ಬಳಿ ಪೊಲೀಸ್ ಪಡೆಗಳು ಲಾಠಿ ಚಾರ್ಜ್ ನಡೆಸಿದವು.

ಬೆಳಿಗ್ಗೆ 11.25 ರ ಸುಮಾರಿಗೆ, ಪ್ರತಿಭಟನಾಕಾರರು ಹೈ-ಸೆಕ್ಯುರಿಟಿ ವಲಯದಲ್ಲಿ ನಿರ್ಮಿಸಲಾದ ಬಹು ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಘರ್ಷಣೆಯಂತಹ ಪರಿಸ್ಥಿತಿ ಉಂಟಾಗಿ, ಕೆಲವು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.

X
Kannada Prabha
www.kannadaprabha.com