ಸಂತಾನ ಹರಣ ಶಸ್ತ್ರ ಚಿಕಿತ್ಸೆ ದುರಂತ
ದೇಶದ ವೈದ್ಯಕೀಯ ಲೋಕದ ಇತಿಹಾಸದಲ್ಲಿಯೇ ಛತ್ತೀಸ್ಗಡ 'ಸಂತಾನ ಹರಣ ಶಸ್ತ್ರ ಚಿಕಿತ್ಸೆ' ದುರಂತ ಒಂದು ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿದೆ. ಛತ್ತೀಸ್ಗಡ ಸರ್ಕಾರ ಕಳೆದ ನವೆಂಬರ್ನಲ್ಲಿ ಕೈಗೊಂಡಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಯೋಜನೆ ಭಾರಿ ದುರಂತಕ್ಕೆ ಕಾರಣವಾಗಿತ್ತು. ಬಿಲಾಸ್ಪುರದಲ್ಲಿ ಸರ್ಕಾರ ಕೈಗೊಂಡಿದ್ದ ಉಚಿತ ಸಂತಾನ ಹರಣ ಶಸ್ತ್ರಚಿಕಿತ್ಸೆ ಅಭಿಯಾನದಿಂದಾಗಿ ಸುಮಾರು 9 ಮಂದಿ ಮಹಿಳೆಯರು ದಾರುಣ ಸಾವನ್ನಪ್ಪಿದ್ದರು.
ಕೇವಲ ಐದು ಗಂಟೆಯ ಅವಧಿಯಲ್ಲಿ 80 ಮಂದಿ ಮಹಿಳೆಯರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು. ಅದೂ ಕೂಡ ನುರಿತ ವೈದ್ಯರ ನೇತೃತ್ವದಲ್ಲಿ ನಡೆದ ಸಂತಾನಹರಣ ಶಸ್ತ್ರಚಿಕಿತ್ಸೆ ಅಭಿಯಾನದಲ್ಲಿ ಮಹಿಳೆಯರು ಸಾವಿಗೀಡಾಗಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.
ಬಳಿಕ ನಡೆದ ತನಿಖೆಯಲ್ಲಿ ವೈದ್ಯರ ಶಸ್ತ್ರ ಚಿಕಿತ್ಸೆಗೆ ಬಳಸಿದ ಉಪಕರಣಗಳು ತುಕ್ಕುಹಿಡಿದಿದ್ದವು ಮತ್ತು ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯರಲ್ಲಿ ರಕ್ತ ಸ್ರಾವ ತೀವ್ರಗೊಂಡ ಪರಿಣಾಮ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿತ್ತು. ಘಟನೆಯಿಂದ ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಘಟನೆಯನ್ನು ಖಂಡಿಸಿದ್ದರಲ್ಲದೇ ತನಿಖೆಗೆ ಆದೇಶಿಸಿದ್ದರು. ಅಲ್ಲದೆ ಸಾವಿಗೀಡಾದವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರುಪಾಯಿ ಘೋಷಣೆ ಮಾಡಲಾಗಿತ್ತು.