ಮಂಗಳಯಾನ ಯಶಸ್ವಿ

ಮಂಗಳಯಾನ
ಮಂಗಳಯಾನ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮ್ಮಡಿಗೊಳಿಸಿದ್ದು, ಮಂಗಳಯಾನ ಯೋಜನೆ. 2013 ನವೆಂಬರ್ 5ರಂದು ಆಂಧ್ರಪ್ರದೇಶದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) 2014 ಸೆಪ್ಟೆಂಬರ್ 24ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ ಸೇರಿತು. ಆ ಮೂಲಕ ಇಡೀ ವಿಶ್ವದ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿ ತೋರಿಸಿತ್ತು. ಮೊದಲ ಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ ಏಕೈಕ ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಲಭಿಸಿತು.

ಅಮೆರಿಕ, ರಾಷ್ಯಾ, ಚೀನಾ, ಜಪಾನ್ ಮತ್ತು ಬ್ರಿಟನ್ ದೇಶಗಳು ಈ ಹಿಂದೆ ಮಂಗಳಯಾನ ಯೋಜನೆಯನ್ನು ಹಮ್ಮಿಕೊಂಡಿದ್ದವಾದರೂ ಈ ಎಲ್ಲ ದೇಶಗಳ ಮೊದಲ ಯತ್ನ ವಿಫಲವಾಗಿತ್ತು. ಹೀಗಾಗಿ ಇಡೀ ವಿಶ್ವದ ಗಮನ ಭಾರತದ ಮಂಗಳಯಾನ ಯೋಜನೆ ಮೇಲೆ ನೆಟ್ಟಿತ್ತು. ಅಮೆರಿಕದ ಮಂಗಳಯಾನ ಯೋಜನೆಗೆ ಹೋಲಿಸಿದರೆ ಮೂರು ಪಟ್ಟು ಕಡಿಮೆ ವೆಚ್ಚದಲ್ಲಿ ಇಸ್ರೋ ಮಂಗಳಯಾನ ಯೋಜನೆಯನ್ನು ರೂಪಿಸಿದ್ದು, ಕೇವಲ 450 ಕೋಟಿ ರುಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗಿತ್ತು. ವೆಚ್ಚದ ವಿಚಾರದಲ್ಲಿಯೂ ಭಾರತದ ಮಂಗಳಯಾನ ಯೋಜನೆ ವಿಶ್ವವೇ ನಿಬ್ಬೆರಗಗಾವಂತೆ ಮಾಡಿತ್ತು.

ಮಂಗಳಯಾನ ಉಪಗ್ರಹವನ್ನು ಯಶಸ್ವಿಯಾಗಿ ಕೆಂಪುಗ್ರಹದ ಕಕ್ಷೆಗೆ ಸೇರಿಸುವ ಮೂಲಕ ಭಾರತ ಈ ಸಾಧನೆಗೈದ ಏಷ್ಯಾದ ಮೊದಲ ಮತ್ತು ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಯಿತು. ಇದಿಷ್ಟೇ ಅಲ್ಲದೆ ಅಮೆರಿಕದ ಟೈಮ್ಸ್ ಮ್ಯಾಗಜಿನ್ ವಿಶ್ವದ 25 ಅತ್ಯುತ್ತಮ ಆವಿಷ್ಕಾರಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಭಾರತದ ಮಂಗಳಯಾನ ಯೋಜನೆಗೆ ಮೊದಲ ಸ್ಥಾನ ನೀಡಲಾಗಿತ್ತು. ಅಲ್ಲದೇ ಮಂಗಳಯಾನ ಯೋಜನೆಯನ್ನು 'ಸೂಪರ್ ಸ್ಮಾರ್ಟ್ ಯೋಜನೆ' ಎಂದು ಶ್ಲಾಘಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com