ಲಕ್ಷ್ಮಿಗೂ ಕಮಲದ ಹೂವಿಗೂ ಇರುವ ನಂಟು

ಲಕ್ಷ್ಮಿ ಕಮಲದ ಹೂವಿನ ಮೇಲೆ ಆಸೀನಳಾಗಿರುವ ದೇವತೆ, ಕಮಲ ನೀರಿನಲ್ಲೇ ಬೆಳೆಯುತ್ತದೆಯಾದರೂ ನೀರು ಅದಕ್ಕೆ ಅಂಟಿಕೊಳ್ಳುವುದಿಲ್ಲ, ಕಮಲದ ಹೂವಿನ ಮೇಲೆ ನೀರು ಹಾಕಿದರೂ ಅದು ಜಾರಿ ಹೋಗುತ್ತದೆ.

ಸಂಪತ್ತಿಗೆ ಅಧಿದೇವತೆ ಲಕ್ಷ್ಮಿ. ಲಕ್ಷ್ಮಿ ಎಂಬ ಹೆಸರು ಬಂದಿರುವುದು ಸಂಸ್ಕೃತದಲ್ಲಿ ಲಕ್ಷ್ಯ(ಗುರಿ) ಎಂಬ ಶಬ್ದದಿಂದ. ಹೆಸರೇ ಸೂಚಿಸುವಂತೆ ಲಕ್ಷ್ಮಿ ದೇವತೆ ಐಹಿಕ, ಆಧ್ಯಾತ್ಮಿಕ ಜೀವನದ ಉನ್ನತಿಯ ಪ್ರತೀಕವಾಗಿದ್ದಾಳೆ.

ಉಪನಿಷತ್-ಪುರಾಣಗಳಲ್ಲಿ ಐಹಿಕ ಸಂಪತ್ತಿನ ವಿಷಯ ಚರ್ಚೆಗೆ ಬಂದಾಗಲೆಲ್ಲಾ,  ಲೌಕಿಕ ಸಂಪತ್ತಿನಲ್ಲಿ ಅತಿ ಹೆಚ್ಚು ವ್ಯಾಮೊಹ ಇಟ್ಟುಕೊಳ್ಳದಂತೆ ಋಷಿಗಳು, ಸಾಧು- ಸಂತರ ಉಪದೇಶವಿದೆ. ಬುದ್ಧ- ಶಂಕರಾಚಾರ್ಯರು ಸೇರಿದಂತೆ ಕಾಲಾನುಸಾರವಾಗಿ ಬಂದ ಸಾಮಾಜಿಕ ಸುಧಾರಕರೆಲ್ಲರೂ ಇದೇ ವಿಷಯವನ್ನು ಮತ್ತೆ ಮತ್ತೆ ಬೋಧಿಸಿದ್ದಾರೆ. ಹಾಗಾದರೆ ಲೌಕಿಕ ಸಂಪತ್ತಿನಲ್ಲಿ ಹೆಚ್ಚು ವ್ಯಾಮೋಹ ಬೆಳಸಿಕೊಳ್ಳದೇ ಇದ್ದರೂ ಐಶ್ವರ್ಯ, ಸಂಪತ್ತಿನ ದೇವತೆಯಾಗಿರುವ ಲಕ್ಷ್ಮಿಯನ್ನು  ಏಕೆ ಪೂಜಿಸಬೇಕೆಂಬ ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಉತ್ತರವನ್ನು ಸ್ವತಃ ಲಕ್ಷ್ಮಿಯಲ್ಲೇ ಸಾಂಕೇತಿಕವಾಗಿ ಕಂಡುಕೊಳ್ಳಲಾಗಿದೆ ಎಂಬುದು ಹಲವು ಆಧ್ಯಾತ್ಮ ಚಿಂತಕರ ಅಭಿಪ್ರಾಯ.

ಲಕ್ಷ್ಮಿ ಕಮಲದ ಹೂವಿನ ಮೇಲೆ ಆಸೀನಳಾಗಿರುವ ದೇವತೆ, ಕಮಲ ನೀರಿನಲ್ಲೇ ಬೆಳೆಯುತ್ತದೆಯಾದರೂ ನೀರು ಅದಕ್ಕೆ ಅಂಟಿಕೊಳ್ಳುವುದಿಲ್ಲ, ಕಮಲದ ಹೂವಿನ ಮೇಲೆ ನೀರು ಹಾಕಿದರೂ ಅದು ಜಾರಿ ಹೋಗುತ್ತದೆ. ಹೇಗೆ ಕಮಲದ ಮೇಲೆ ನೀರು ಅಂತಿಕೊಳ್ಳುವುದಿಲ್ಲವೋ, ಐಹಿಕ ಪ್ರಪಂಚದಲ್ಲಿರುವ ನಾವೂ ಸಹ ಐಹಿಕ ಐಶ್ವರ್ಯದಲ್ಲಿ ಅಗತ್ಯಕ್ಕಿಂತ ಅತಿ ಹೆಚ್ಚು ವ್ಯಾಮೊಹ ಹೊಂದಿರಬಾರದು ಎಂಬುದನ್ನು ಕಮಲದ ಮೇಲೆ ಆಸೀನಳಾಗಿರುವ ಲಕ್ಷ್ಮಿಯ ಸಂದೇಶವಾಗಿದೆ ಎಂದು ಹೇಳುತ್ತಾರೆ.  

ಲಕ್ಷ್ಮಿಯ ನಾಲ್ಕು ಕೈಗಳೂ, ಧರ್ಮ, ಅರ್ಥ, ಕಾಮ ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳನ್ನು ಸೂಚಿಸುತ್ತವೆ. ಮುಂದಿರುವ ಎರಡೂ ಕೈಗಳು ಭೌತಿಕ ಪ್ರಪಂಚವನ್ನು ಸೂಚಿಸಿದರೆ, ಹಿಂದಿರುವ ಎರಡು ಕೈಗಳು ಪಾರಮಾರ್ಥಿಕ ಪ್ರಪಂಚವನ್ನು ಸೂಚಿಸುತ್ತವೆ. ಹಾಗೂ ಅನುಕ್ರಮವಾಗಿ ಎರಡೂ ವಿಷಯದಲ್ಲಿ ಪರಿಪೂರ್ಣತೆಯನ್ನು ಪಡೆಯುವುದಕ್ಕೆ ಸಹಕಾರಿಯಾಗಲಿದೆ. ಹಿಂದಿನ ಬಲಭಾಗದ ಕೈಯ್ಯಲ್ಲಿರುವ ಕಮಲ ಧರ್ಮಮಾರ್ಗದಲ್ಲಿ ಕರ್ತವ್ಯಗಳನ್ನು ಮಾಡುವುದನ್ನು ಸೂಚಿಸಿದರೆ, ಎಡ ಭಾಗದ ಕೈಯ್ಯಲ್ಲಿರುವ ಕಮಲ ಮೋಕ್ಷಕ್ಕೆ ದಾರಿ ಎಂಬ ವಿಶ್ಲೇಷಣೆಯೂ ಇದೆ.

ಹೀಗೆ ಲಕ್ಷ್ಮಿ ಹಾಗೂ ಕಮಲದ ಹೂವಿನ ಮರ್ಮವನ್ನು ಅನೇಕ ಆಧ್ಯಾತ್ಮಿಕ ಚಿಂತಕರು ಲೌಕಿಕ ಪಾರಮಾರ್ಥಿಕ ಬೋಧನೆಗಳ ದೃಷ್ಟಿಯಿಂದ ವಿಶ್ಲೇಷಿಸಿದ್ದು, ಸಂಪತ್ತು(ಲಕ್ಷ್ಮಿ) ಎಂಬುದು ಕಮಲದ ಮೇಲಿನ ನೀರಿನಂತೆ ಇರಬೇಕು ಎಂಬ ಬೋಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com