ಶಿವರಾತ್ರಿ ದಿನದಂದು ಉಪವಾಸ ಮಾಡುವುದು ಹೇಗೆ?

ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿ ದಿನದಂದು ಆಚರಿಸಲಾಗುತ್ದದೆ. ಶಿವ ಭಕ್ತರಿಗೆ ಶಿವರಾತ್ರಿ ಪವಿತ್ರವಾದ ದಿನ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜೆ ಹಾಗೂ...
ಶಿವರಾತ್ರಿ ದಿನದಂದು ಉಪವಾಸವನ್ನು ಮಾಡುವುದು ಹೇಗೆ?
ಶಿವರಾತ್ರಿ ದಿನದಂದು ಉಪವಾಸವನ್ನು ಮಾಡುವುದು ಹೇಗೆ?

ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿ  ದಿನದಂದು ಆಚರಿಸಲಾಗುತ್ದದೆ. ಶಿವ ಭಕ್ತರಿಗೆ ಶಿವರಾತ್ರಿ  ಪವಿತ್ರವಾದ ದಿನ. ಅಂದು ಶಿವನಿಗೆ ವಿಶೇಷ ರೀತಿಯಲ್ಲಿ ಪೂಜೆ  ಹಾಗೂ ಪುನಸ್ಕಾರಗಳು  ನಡೆಯುತ್ತದೆ.

ಮಹಾಶಿವರಾತ್ರಿಯಂದು ಶಿವನ ಭಕ್ತರು ಇಡೀ ದಿನ ವ್ರತವನ್ನು  ಕೈಗೊಳ್ಳುತ್ತಾರೆ. ಒಂದು ದಿನ ಉಪವಾಸ ಹಾಗೂ ಒಂದು ರಾತ್ರಿ  ಜಾಗರಣೆಯನ್ನು ಮಾಡುವ ಮೂಲಕ ಶಿವನ ಜಪವನ್ನು  ಮಾಡುತ್ತಾರೆ. ಶಿವರಾತ್ರಿ  ಉಪವಾಸವು ಹಗಲಿನಿಂದ  ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ  ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ  ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು.

ವ್ರತ ಮಾಡುವವರು ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಿ  ಶುಭ್ರವಾದ ಬಟ್ಟೆಯನ್ನು ಧರಿಸಿ ಶಿವನ ಗುಡಿಗೆ ಹೋಗಿ ಪ್ರಾರ್ಥನೆ  ಸಲ್ಲಿಸಿ, ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದಿನವಿಡೀ ಓಂ  ನಮಃ ಶಿವಾಯ ಎಂದು  ಜಪಿಸುತ್ತಾ ಶಿವನನ್ನು ನೆನೆಯಬೇಕು.

ಉಪವಾಸ ಮಾಡುವ ಪ್ರಕ್ರಿಯೆ
ಗ್ರಂಥಗಳಲ್ಲಿ ಹೇಳುವ ಪ್ರಕಾರ ಶಿವರಾತ್ರಿಯಂದು ವ್ರತ ಮಾಡುವವರೂ ದಿನವಿಡೀ ಉಪವಾಸವಿದ್ದು ಶಿವನ ಜ್ಞಾನವನ್ನು ಮಾಡಬೇಕೆಂದು ಹೇಳಲಾಗುತ್ತದೆ. ಆದರೆ, ಕೆಲವರು ಹಣ್ಣಿನ ರಸ, ಹಣ್ಣುಗಳು ಮತ್ತು  ಹಾಲು  ಸೇವಿಸಬಹುದು. ಬೇಳೆ, ಕಾಳು, ಧಾನ್ಯ, ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ.  

ಕೆಲವರು ವ್ರತದ ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೂ ನೀರ ಹನಿ ಕೂಡ ಮುಟ್ಟುವುದಿಲ್ಲ. ಮರುದಿನ ಮುಂಜಾನೆ  ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು  ಸಂಪನ್ನಗೊಳಿಸಬೇಕು. ವ್ರತ  ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ  ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ.  

ಶಿವರಾತ್ರಿಯಂದು ಉಪವಾಸ ಮಾಡುವುದಕ್ಕೂ ಹಿನ್ನೆಲೆಯಿದೆ.

ಗುಹಾಂಡ ಎಂಬ ಬೇಟೆಗಾರನೊಬ್ಬ ಕಾಡಿಗೆ ಹೋಗಿ  ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ. ಹೀಗೆ ಒಂದು ದಿನ ಕಾಡಿಗೆ  ಹೋದಾಗ ಆ ದಿನ ಶಿವರಾತ್ರಿಯಾಗಿತ್ತು. ಈ ಬಗ್ಗೆ ಆತನಿಗೆ  ಅರಿವೇ ಇರಲಿಲ್ಲ. ಬೇಟೆಗೆ ಹೋದ  ಈತನಿಗೆ ಎಷ್ಟು  ಹೊತ್ತಾದರು ಒಂದು ಪ್ರಾಣಿಯೂ ಸಿಗಲಿಲ್ಲ. ಬೇಟೆಗಾಗಿ  ಪ್ರಾಣಿಗಳನ್ನು ಹುಡುವುದರಲ್ಲೆ ಕತ್ತಲಾಗಿ ಹೋಗಿತ್ತು. ತುಂಬಾ  ಕತ್ತಲೆಯಾದ ಕಾರಣ ಈತ ಅಂದು ಕಾಡಲ್ಲೇ ಸಮಯ  ಕಳೆಯುವಂತೆ  ಆಯಿತು.

ಕಾಡುಪ್ರಾಣಿಗಳ ಉಪಟಳಕ್ಕೆ ಹೆದರಿದ ಈತ ಒಂದು ಮರವನ್ನು  ಹತ್ತಿ ಕುಳಿತು. ಹಸಿವಿಗೆ ಅಳುತ್ತಾ ಮರದ ಎಲೆಗಳನ್ನು ಕಿತ್ತು  ಕೆಳಗೆ ಹಾಕುತ್ತಿದ್ದ. ಬೇಟೆಗಾರ ಹತ್ತಿದ್ದು ಬಿಲ್ವ ಮರ ಹಾಗೂ ಕೆಳಗೆ  ಶಿವಲಿಂಗವಿದೆ  ಎಂಬುದು ಆತನಿಗೆ ತಿಳಿದಿರಲಿಲ್ಲ. ಹೀಗೆ  ರಾತ್ರಿಯಿಡೀ ಆತ ಹಸಿವಿನಿಂದ ಇದ್ದದ್ದು, ಕಣ್ಣೀರು ಹಾಗೂ ಬಿಲ್ವ  ಪತ್ರದ ಎಲೆಗಳು ಶಿವಲಿಂಗ ಮೇಲೆ ಬೀಳುತ್ತಿತ್ತು.  ಶಿವರಾತ್ರಿಯಂದು ಆತ ಮಾಡಿದ ಕಾರ್ಯದಿಂದ  ಪ್ರಸನ್ನನಾದ  ಪರಮಶಿವನು ಪ್ರತ್ಯಕ್ಷನಾಗಿ ಆತ ಮಾಡಿದ ಎಲ್ಲಾ  ಅಪರಾಧವನ್ನು ಮನ್ನಿಸಿ ಆತನಿಗೆ ಮುಕ್ತಿ ಕರುಣಿಸುತ್ತಾನೆ. ಹೀಗೆ  ಶಿವರಾತ್ರಿಯಂದು ಉಪವಾಸ ಮಾಡುವ ಮತ್ತು ಶಿವನಿಗೆ  ಪ್ರೀತಿಯನ್ನು ಉಂಟು  ಮಾಡಲು ಶಿವನ ನಾಮಸ್ಮರಣೆ ಮಾಡುವ  ಪರಿಕ್ರಮ ಬೆಳೆದು ಬಂದಿದೆ.

ಶಿವರಾತ್ರಿಯಂದು ಉಪವಾಸ ಮಾಡಿದರೆ ಹಲವು  ಪ್ರಯೋಜನಗಳಿವೆ ಎಂತಲೂ ಹೇಳುತ್ತಾರೆ. ದೈಹಿಕವಾಗಿ  ಹಾಗೂ ಮಾನಸಿಕವಾಗಿ ಮನುಷ್ಯ ಆರೋಗ್ಯವಾಗಿರಬಲ್ಲ  ಎಂತಲೂ ಹೇಳಲಾಗುತ್ತದೆ. ಹಿಂದೂ  ಧರ್ಮದ ಪ್ರಕಾರ,  ಶಿವರಾತ್ರಿಯಂದು ವ್ರತ ಮಾಡಿದರೆ ವ್ರತವು ವ್ಯಕ್ತಿಗೆ  ತಾಳ್ಮೆಯನ್ನು ಕಲಿಸುತ್ತದೆ. ಕೆಟ್ಟದ್ದನ್ನು ನಿರ್ಲಕ್ಷ್ಯ ಮಾಡುವ  ಗುಣವನ್ನು ರೂಪಿಸುತ್ತದೆ. ಉಪವಾಸದಿಂದ ಶಿವನಾಮ  ಜಪಿಸಿದರೆ ಮನಸ್ಸನ್ನು  ನಿಯಂತ್ರಿಸುವ ಸಾಮರ್ಥ್ಯೆ  ಹೆಚ್ಚಾಗುತ್ತದೆ. ಕೆಟ್ಟ ಗುಣಗಳಾದ ಕೋಪ, ಹೊಟ್ಟೆಕಿಚ್ಚು ಹಾಗೂ  ಇನ್ನಿತರೆ ಗುಣಗಳು ಹೆಚ್ಚಾಗುವುದಕ್ಕೆ ಅವಕಾಶಕೊಡುವುದಿಲ್ಲ.  ರಾತ್ರಿಯಲ್ಲಿ ಜಾಗರಣೆ ಇರುವುದರಿಂದ ಕೆಟ್ಟ  ಗುಣಗಳನ್ನು  ಎದುರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com