ನಾನು ಸಮರ್ಥವಾಗಿ ಕೆಲಸ ನಿಭಾಯಿಸಿಲ್ಲ

ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಬರೆದುಕೊಳ್ಳಿ, ನನ್ನ ವಿರುದ್ಧ ಯಾವುದೇ ಆರೋಪಗಳನ್ನು...
ರಂಜಿತ್ ಸಿನ್ಹಾ
ರಂಜಿತ್ ಸಿನ್ಹಾ

ನವದೆಹಲಿ: ಕೇಂದ್ರ ಸಿಬಿಐ ನಿರ್ದೇಶಕ ಸ್ಥಾನದಿಂದ ರಂಜಿತ್ ಸಿನ್ಹಾ ಇಂದು ಅಧಿಕೃತವಾಗಿ ನಿವೃತ್ತಿ ಹೊಂದಿದ್ದಾರೆ. ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಸಿನ್ಹಾ ಆಕ್ರೋಶದ ಮಾತುಗಳಿಂದ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ತಮ್ಮ ಅಧಿಕಾರವಧಿಯ ಕರ್ತವ್ಯ ಅನುಭವಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಂಜಿತ್ ಸಿನ್ಹಾ ನಾನು ಸಮರ್ಥವಾಗಿ ಕೆಲಸ ನಿಭಾಯಿಸಿಲ್ಲ ಎಂದು ಆಕ್ರೋಶದಿಂದ ಉತ್ತರಿಸಿದರು.

ಸಿಬಿಐ ನಿರ್ದೇಶಕರಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸಿನ್ಹಾ, ತಮ್ಮ  ಅಧಿಕಾರವಧಿ ಪೂರ್ತಿ ಚರ್ಚೆಯಲ್ಲೇ ಮುಳುಗಿಹೋಗಿದ್ದರು. ಅದರಲ್ಲಿ ಪ್ರಮುಖವಾಗಿ, ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಖುದ್ದು ಭೇಟಿ ಮಾಡಿದ್ದರು ಎಂಬ ಕಾರಣಕ್ಕಾಗಿ, ಆ ಪ್ರಕರಣದ ವಿಚಾರಣೆಯಿಂದ ಸಿನ್ಹಾ ಅವರನ್ನು ದೂರ ಮಾಡಲಾಗಿತ್ತು.

ಕೆಲ ದಿನಗಳ ಹಿಂದೆ ಅಸ್ಸಾಂನ ಗುವಹಾಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದೇಶ ಸಂರಕ್ಷಣೆಯ ಕುರಿತು ಮಾತನಾಡುತ್ತಿದ್ದ ವೇಳೆ, ತಮ್ಮ ಕರ್ತವ್ಯ ನಿಷ್ಠೆಯನ್ನು ಮರೆತು ನಿದ್ದೆಗೆ ಜಾರಿದ್ದರು ಸಿನ್ಹಾ. ಇದರಿಂದಾಗಿ ಬಾರಿ ಚರ್ಚೆಗೆ ಕಾರಣೀಭೂತರಾಗಿದ್ದರು.

ಹೀಗೆ ಹಲವು ವಿಚಾರಗಳಲ್ಲಿ ಸಿನ್ಹಾ ಅವರ ಹೆಸರು ಮಾದ್ಯಮಗಳಲ್ಲಿ ತಳುಕು ಹಾಕಿತ್ತು.

ಇಂದು ಅವರ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧಿಕೃತವಾಗಿ ನಿವೃತ್ತಿಯಾದರು. ಇದಕ್ಕೂ ಮುನ್ನಾ ಸುದ್ದಿಗಾರರು ಅವರನ್ನು ಭೇಟಿ ಮಾಡಿ, ತಮ್ಮ ಅಧಿಕಾರವಧಿ ಅನುಭವಗಳ ಕುರಿತು ಪ್ರಶ್ನಿಸಿದರು.

ಇದರಿಂದ ಆಕ್ರೋಶಗೊಂಡ ರಂಜಿತ್ ಸಿಹ್ನಾ, ನಾನು ಏನನ್ನು ಹೇಳಲು ಬಯಸುವುದಿಲ್ಲ. ತಾನು ತನ್ನ ಅಧಿಕಾರವಧಿಯ ವೇಳೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಬರೆದುಕೊಳ್ಳಿ, ನನ್ನ ವಿರುದ್ಧ ಯಾವುದೇ ಆರೋಪಗಳನ್ನು ಬೇಕಾದರೂ ಬರೆದುಕೊಳ್ಳಿ ಎಂದು ಆಕ್ರೋಶದಿಂದ ಉತ್ತರಿಸಿ ಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com