ನವದೆಹಲಿ: ಸಿಬಿಐ ನೂತನ ನಿರ್ದೇಶಕರ ಆಯ್ಕೆ ಮಂಗಳವಾರ ನಡೆಯಲಿದೆ. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಆಯ್ಕೆ ಸಮಿತಿಯಲ್ಲಿ ಇರುವ ಮತ್ತಿಬ್ಬರು ಕರ್ನಾಟಕದವರೇ.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್. ಎಲ್ ದತ್ತು ಅವರಿರುವ ತ್ರಿಸದಸ್ಯರ ಉನ್ನತ ಸಮಿತಿ ಸಿಬಿಐ ಮುಖ್ಯಸ್ಥರ ಆಯ್ಕೆ ಮಾಡಲಿದೆ. ಹಾಲಿ ನಿರ್ದೇಶಕ ರಂಜಿತ್ ಸಿನ್ಹಾ ಅವರು ಮಂಗಳವಾರ ನಿವೃತ್ತರಾಗಲಿದ್ದಾರೆ. ಸಿನ್ಹಾ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯೊಂದು ಈಗಾಗಲೇ ಪ್ರಧಾನಿ ಕಾರ್ಯಾಲಯದ ಕೈಯಲ್ಲಿದೆ. ಆಂತರಿಕ ಭದ್ರತೆಯ ವಿಶೇಷ ಕಾರ್ಯದರ್ಶಿ ಪ್ರಕಾಶ್ ಮಿಶ್ರಾ, ಹೋಂಗಾರ್ಡ್ಸ್ನ ಡಿಜಿ ಅಭಯ್ ಆನಂದ್, ಎನ್ಐಎ ನಿರ್ದೇಶಕ ಶರತ್ ಕುಮಾರ್, ಸಿಬಿಐ ವಿಶೇಷ ನಿರ್ದೇಶಕ ಅನಿಶ್ ಸಿನ್ಹಾ, ರೈಲ್ವೆ ಸುರಕ್ಷಾ ಪಡೆಯ ಡಿಜಿ ಕೃಷ್ಣ ಚೌಧರಿ ಅವರ ಹೆಸರು ಸಿಬಿಐ ನಿರ್ದೇಶಕ ಸ್ಥಾನಕ್ಕೆ ಕೇಳಿಬರುತ್ತಿದೆ.
Advertisement