ಬೆಂಗಳೂರು: ಪ್ರಯಾಣಿಕರ ಹಿತದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ ಅಡಿ ಬರುವ ಎಲ್ಲ 25 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಚಾಲಕರಿಗೆ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಸೂಚಿಸಿದ್ದಾರೆ.
ದೆಹಲಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸುರಕ್ಷಾ ಕ್ರಮವಾಗಿ ರಾಜ್ಯದ ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆ ನಡೆಸಿದ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು, ಆಟೋ ಚಾಲಕಕ ಜತೆ ಸಭೆ ಬಳಿಕ ಮಾತನಾಡಿದ ಅವರು, ಸಾರಿಗೆ ಇಲಾಖೆಯಿಂದ ಪರ್ಮಿಟ್ ನೀಡುವಾಗ ಕೆಲವು ನಿಯಮಗಳನ್ನು ಸೂಚಿಸಿರುತ್ತದೆ. ಆ ನಿಯಮಗಳನ್ನು ಟ್ಯಾಕ್ಸಿ, ಕ್ಯಾಬ್ ಚಾಲಕರು ಪಾಲಿಸುತ್ತಿಲ್ಲ ಎಂದರು.
ಚಾಲಕನನ್ನು ನೇಮಿಸಿಕೊಳ್ಳುವ ಮೊದಲು ಆತನ ಪೂರ್ವಾಪರವನ್ನು ಪರಿಶೀಲಿಸಬೇಕಿದೆ. ಎಲ್ಲಿಂದಲೋ ಬಂದವರಿಗೆ ಕೆಲಸ ಕೊಟ್ಟು, ನಂತರ ಅದರಿಂದಾಗುವ ಅನಾಹುತ ತಪ್ಪಿಸಬೇಕಿದೆ. ಇದು ಸಂಸ್ಥೆ ಮಾಲೀಕರ ಜವಾಬ್ದಾರಿಯೂ ಹೌದು.
ಅವರು ಚಾಲಕನ್ನು ನೇಮಿಸಿ ಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಪೂರ್ವಾಪರ ವಿಚಾರಿಸಬೇಕು. ಕಚೇರಿ ಸ್ಥಳಾಂತರಿಸುವ ಮುನ್ನ ಪೊಲೀಸ್, ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ ಎಂದು ಅವರು ತಿಳಿಸಿದರು.
ಇನ್ನು ಚಾಲಕರನ್ನು ಕಂಪನಿಯಿಂದ ಕಂಪನಿಗೆ ಬದಲಾಯಿಸುವುದು ದಲ್ಲಾಳಿಗಳು. ಈ ವೇಳೆ ಅವರು ಚಾಲಕರ ದಾರಿ ತಪ್ಪಿಸುತ್ತಾರೆ. ಇದು ಸರಿಯಲ್ಲ, ಅವರೇ ಖುದ್ದು, ನಿಯಮ ಪಾಲಿಸುವಂತೆ ಚಾಲಕರಿಗೆ ಸೂಚಿಸಿ ತಾವೂ ಪಾಲಿಸಬೇಕು.
ಸೂಚಿಸಿರುವ ಬಣ್ಣಗಳನ್ನು ಕ್ಯಾಬ್, ಟ್ಯಾಕ್ಸಿ ಹೊಂದಿರಬೇಕು, ಸಮವಸ್ತ್ರ ಧರಿಸಬೇಕು, ಚಾಲನಾ ಪರವಾನಗಿಯನ್ನು ವಾಹನದಲ್ಲಿ ಪ್ರದರ್ಶಿಸುವುದು, ಜಿಪಿಎಸ್ ಅಳವಡಿಸುವುದು ಸೇರಿದಂತೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ 25 ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದರು.
ಕ್ಯಾಬ್ ಚಾಲಕರಿಗೆ ನಿಯಮ
Advertisement