ಇಸ್ಲಾಮಾಬಾದ್: ಭಯೋತ್ಪಾದನೆಗೆ ಉತ್ತೇಜನೆ ನೀಡಿದ ಆರೋಪದಡಿ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ, ಕ್ರಿಕೆಟಿಗ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಫೈಸಲಾಬಾದ್ನಲ್ಲಿ ಪಂಜಾಬ್ ಪ್ರಾಂತ್ಯದ ಮಾಜಿ ಕಾನೂನು ಸಚಿವ ರಾಣಾ ಸನಾವುಲ್ಲಾ ರ್ಯಾಲಿ ವೇಳೆ ಇಮ್ರಾನ್ ಖಾನ್ ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರು ಸೋಮವಾರ ನಡೆದ ರ್ಯಾಲಿ ವೇಳೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತನಾಗಿದ್ದಾನೆ ಎಂದು ಸನಾವುಲ್ಲಾ ಹೇಳಿದ್ದು, ಈ ಹೇಳಿಕೆ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಮೇಲೆ ಮಂಗಳವಾರ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಪಾಕಿಸ್ತಾನ್ ಮುಸ್ಲಿಂ ಲೀಗ್ ಅವಾಮಿ ಮುಖ್ಯಸ್ಥ ಶೇಖ್ ರಶೀದ್, ಪಾಕಿಸ್ತಾನ್ ಥೆರಿಕ್-ಇ-ಇನ್ಸಾಫ್ ನಾಯಕರಾದ ಮೆಹಮೂದ್ ಖುರೇಶಿ, ಆರಿಫ್ ಆಲ್ವಿ, ಅಸಾದ್ ಉಮರ್ ಮತ್ತು ನೂರಾರು ಜನ ಪ್ರತಿಭಟನಾಕಾರರ ಮೇಲೂ ಪ್ರಕರಣ ದಾಖಲಾಗಿದೆ.
ಇಮ್ರಾನ್ ಖಾನ್ ಮತ್ತು ಆತನ ಬೆಂಬಲಿಗರು ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಿದ್ದರು. ನನ್ನ ಮನೆಯ ಮೇಲೆಯೂ ದಾಳಿ ನಡೆಸುವ ಸಂಚು ರೂಪಿಸಿದ್ದರು. ಸುಮಾರು 400 ರಿಂದ 500 ಜನ ನನ್ನ ಮನೆ ಮೇಲೆ ದಾಳಿ ಮಾಡಲು ನೋಡಿದ್ದಾರೆ. ಆದರೆ ಭದ್ರತೆ ಕಾರಣದಿಂದ ಸಾಧ್ಯವಾಗಿಲ್ಲ ಎಂದು ಮಾಜಿ ಸಚಿವ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಆಡಳಿತ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಮತ್ತು ವಿರೋಧ ಪಕ್ಷ ಪಾಕಿಸ್ತಾನ್ ಥೆರಿಕ್-ಇ-ಇನ್ಸಾಫ್ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಸೋಮವಾರ ನಡೆದ ಗಲಾಟೆಯಲ್ಲಿ ಎಡಪಂಥೀಯ ಕಾರ್ಯಕರ್ತ ಹಕ್ ನವಾಜ್ ಎಂಬುವರು ಸಾವಿಗೀಡಾಗಿದ್ದು ಪೊಲೀಸರು ಸೇರಿದಂತೆ 17 ಜನ ಗಾಯಗೊಂಡಿದ್ದರು.
Advertisement