ಬೆಂಗಳೂರು: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೊಬೈಲ್ನಲ್ಲಿ ಫೋಟೋ ನೋಡಿ, ಆಟವಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದ ಶಾಸಕರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಮೂರು ದಿನಗಳೊಳಗೆ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದೆ.
ರಾಜ್ಚ ಬಿಜೆಪಿ ಶಿಸ್ತು ಸಮಿತಿ ಸಂಚಾಲಕರಾದ ರಘುನಾಥರಾಮ್ ಮಲ್ಕಾಪುರೆ ಅವರು ಮೊಬೈಲ್ನಲ್ಲಿ ಫೋಟೋ ನೋಡಿದ್ದ ಔರಾದ್ ಶಾಸಕ ಪ್ರಭು ಚೌವಾಣ್ ಮತ್ತು ಹಿರೇಕೆರೂರು ಶಾಸಕ ಯು.ಬಿ ಬಣಕಾರ ಅವರಿಗೆ ಇಂದು ನೋಟಿಸ್ ಜಾರಿಗೊಳಿಸಿದೆ.
ಡಿ.10ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಶಾಸಕರು ಮೊಬೈಲ್ನಲ್ಲಿ ಚಿತ್ರಗಳನ್ನು ವೀಕ್ಷಿಸಿದ್ದು, ಇದು ಖಾಸಗಿ ಸುದ್ದಿವಾಹಿನಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಸಾರಗೊಂಡಿತ್ತು. ಇದು ಗಂಭೀರ ವರ್ತನೆಯಾಗಿದ್ದು, ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಪಕ್ಷ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನೋಟಿಸ್ ತಲುಪಿದ ಮೂರು ದಿನಗಳಲ್ಲಿ ವಿವರಣೆ ನೀಡಬೇಕೇಂದು ಸೂಚನೆ ನೀಡಲಾಗಿದೆ.
ಘಟನೆ ಹಿನ್ನೆಲೆ
ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಪ್ರಭು ಚೌವಾಣ್ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರ ಚಿತ್ರವನ್ನು ನೋಡುತ್ತಿದ್ದರು. ಯು.ಬಿ ಬಣಕಾರ ಅವರು ಕ್ಯಾಂಡಿಕ್ರಶ್ ಆಟವಾಡುತ್ತಿದ್ದರು. ಈ ಬಗ್ಗೆ ಸದನದಲ್ಲಿ ಗುರುವಾರ ಕೋಲಾಹಲಕ್ಕೆ ಕಾರಣವಾಗಿದ್ದು ಕಲಾಪ ಸಂಪೂರ್ಣವಾಗಿ ವ್ಯರ್ಥವಾಗಿತ್ತು.
Advertisement