ರಾಮಮಂದಿರ ನಿರ್ಮಾಣ ಭಾರತೀಯರ ಆಶಯ: ಯುಪಿ ರಾಜ್ಯಪಾಲ

ರಾಮ್ ನಾಯ್ಕ್
ರಾಮ್ ನಾಯ್ಕ್

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಇದು ಭಾರತೀಯರ ಬಯಕೆ ಎಂದು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯ ಫೈಜಾಬಾದ್‌ನಲ್ಲಿ ಅವಧ್ ವಿಶ್ವವಿದ್ಯಾಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಮ್ ನಾಯ್ಕ್ ಅವರು, ಆದಷ್ಟು ಬೇಗ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು. ಇದು ಭಾರತೀಯ ದಶಕಗಳ ಬಯಕೆ. ಇದನ್ನು ಪೂರೈಸುವ ಅನಿವಾರ್ಯವಿದೆ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮನ ಜನ್ಮಸ್ಥಳ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಹೀಗಾಗಿ ಭಾರತೀಯ ಇಚ್ಛೆಯಂತೆ ಬಾಬ್ರಿ ಮಸೀದಿ ಇರುವ ಸ್ಥಳದಲ್ಲೇ ರಾಮ ಮಂದಿರವನ್ನು ನಿರ್ಮಿಸಬೇಕು. ಇದು ಭಾರತೀಯರಿಗೆ ನಾವು ಕೊಡಬಹುದಾದ ಕೊಡುಗೆ ಎಂದು ಹೇಳಿದ್ದಾರೆ. 

ಉತ್ತರಪ್ರದೇಶ ರಾಜ್ಯಪಾಲ ಸರ್ಕಾರದ ಮುಖವಾಣಿಯಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರೇಣುಕ ಚೌಧರಿ ಆರೋಪಿಸಿದ್ದಾರೆ.

ಮತ್ತೊಂದೆಡೆ ತೃಣಮೂಲ ಕಾಂಗ್ರೆಸ್ ಸಂಸದ ಡೇರೆಕ್ ಒ'ಬ್ರೀನ್ ಅವರು, ರಾಮ್ ನಾಯ್ಕ್ ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಬಯಕೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಸುಗಮ ಕಲಾಪವನ್ನು ನಡೆಸಬಹುದು ಎಂಬುದನ್ನು ನೀವು ನಂಬುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಮಮಂದಿರ ನಿರ್ಮಾಣ ಕುರಿತಂತೆ ಈ ಹಿಂದೆ ಹಲವಾರು ಹೇಳಿಕೆಗಳು ಬಂದು ಹೋಗಿದ್ದವು. ಸದ್ಯ ಭೂದಿ ಮುಚ್ಚಿದ ಕೆಂಡದಂತಿದ್ದ ರಾಮ ಮಂದಿರ ನಿರ್ಮಾಣ ವಿಷಯ ನಾಯ್ಕ್‌ರ ಹೇಳಿಕೆಯಿಂದ ಮತ್ತೆ ಭುಗಿಲೇದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com