ಮಧ್ಯಪ್ರದೇಶ ಜೈಲಿನಿಂದ ಪರಾರಿಯಾದ ಐದು ಮಂದಿ ಶಂಕಿತ ಉಗ್ರರು (ಸಂಗ್ರಹ ಚಿತ್ರ)
ಮಧ್ಯಪ್ರದೇಶ ಜೈಲಿನಿಂದ ಪರಾರಿಯಾದ ಐದು ಮಂದಿ ಶಂಕಿತ ಉಗ್ರರು (ಸಂಗ್ರಹ ಚಿತ್ರ)

ಒಬಾಮ ಭಾರತ ಭೇಟಿ ವೇಳೆ ಲಷ್ಕರ್ ಉಗ್ರರ ದಾಳಿ ಸಂಚು

ಒಬಾಮ ಅವರ ಭಾರತ ಪ್ರವಾಸದ ವೇಳೆ ಲಷ್ಕರ್ ಇ ತಾಲಿಬಾನಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದಾರೆ..

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಪ್ರವಾಸದ ವೇಳೆ ಲಷ್ಕರ್ ಇ ತಾಲಿಬಾನಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದಾರೆ ಎಂದು ವಿದೇಶಿ ಗುಪ್ತಚರ ಇಲಾಖೆ ಮೂಲಗಳು ಎಚ್ಚರಿಕೆ ನೀಡಿವೆ.

2008ರ ಮುಂಬೈ ದಾಳಿಯ ರೂವಾರಿ ಲಷ್ಕರ್ ಸಂಘಟನೆ ಮತ್ತೆ ಭಾರತದ ವಿರುದ್ಧ ದಾಳಿಗೆ ಸಜ್ಜಾಗಿದ್ದು, ಮುಂದಿನ ತಿಂಗಳಲ್ಲಿ ಭಾರಿ ವಿಧ್ವಂಸಕ್ಕೆ ಯೋಜನೆ ಹಾಕಿಕೊಂಡಿದೆ. ಈಗಗಾಲೇ ಈ ಸಂಬಂಧ ಉಗ್ರರನ್ನು ತರಬೇತುಗೊಳಿಸಿರುವ ಲಷ್ಕರ್ ಸಂಘಟನೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತನ್ನ ವಿಧ್ವಂಸಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಗಣರಾಜ್ಯೋತ್ಸವ ದಿನಾಚರಣೆಗೆ ಆಹ್ವಾನಿಸಿದ್ದು, ಒಬಾಮ ಅವರು ಕೂಡ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ತಿಂಗಳು ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಇದೇ ಸಂದರ್ಭಕ್ಕಾಗಿ ಕಾಯುತ್ತಿರುವ ಲಷ್ಕರ್ ಸಂಘಟನೆ ಭಾರಿ ವಿದ್ವಂಸಕ  ಕೃತ್ಯ ಎಸಗಲು ಹವಣಿಸುತ್ತಿದೆ.

ಈ ನಡುವೆ ವಿದೇಶಿ ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ಭಾರಿ ಭದ್ರತೆಗೆ ಮುಂದಾಗಿದೆ. ಅಲ್ಲದೇ ನಿನ್ನೆ ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ನಡೆದ ಉಗ್ರದಾಳಿ ಹಿನ್ನಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಸೂಚನೆ ನೀಡಿದೆ. ಇನ್ನು ಇತ್ತೀಚೆಗೆ ಮಧ್ಯಪ್ರದೇಶ ಜೈಲಿನಿಂದ ಪರಾರಿಯಾಗಿದ್ದ ಐವರು ಶಂಕಿತ ಉಗ್ರರ ಕುರಿತಂತೆ ತೀವ್ರ ಶೋಧ ನಡೆಸಲಾಗುತ್ತಿದ್ದು, ಗುಪ್ತಚರ ಇಲಾಖೆ ಕೂಡ ಈ ಐವರು ಶಂಕಿತರಿಗಾಗಿ ಶೋಧ ಕಾರ್ಯ ಆರಂಭಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com