ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಜಿಎಸ್ಎಲ್ವಿ 'ಮಾರ್ಕ್ 3' ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.
ಆಂಧ್ರ ಪ್ರದೇಶದ ಶ್ರೀ ಹರಿಕೊಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲಿ ಇಂದು ಬೆಳಗ್ಗೆ 9.32ರ ಸಮಯದಲ್ಲಿ ಜಿಎಸ್ಎಲ್ವಿ ಮಾರ್ಕ್ 3 ಉಡಾವಣಾ ವಾಹಕವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಜಿಎಸ್ಎಲ್ವಿ ಮಾರ್ಕ್ 3 ನೌಕೆಯು ಮಾನವ ಸಹಿತ ಬಾಹ್ಯಾಕಾಶಯಾನ ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದು, ಇಸ್ರೋದ ಭವಿಷ್ಯದ ಮಾನವ ಸಹಿತ ಚಂದ್ರ ಮತ್ತು ಮಂಗಳಯಾನಕ್ಕೆ ಸಹಕಾರಿಯಾಗಲಿದೆ.
ಜಿಎಸ್ಎಲ್ ಮಾರ್ಕ್ 3 ಯಶಸ್ವಿ ಉಡಾವಣೆಯಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಜಿಎಲ್ವಿಮಾರ್ಕ್ 3 ಅತ್ಯಾಧುನಿಕ ರಾಕೆಟ್ ಆಗಿದ್ದು, ಮಾನವ ಸಹಿತ ನಭಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. 3650 ಕೆಜಿ ತೂಕವಿರುವ ಜಿಎಸ್ಎಲ್ವಿ ಮಾರ್ಕ್ 3 ಸುಮಾರು 4 ಸಾವಿರ ಕೆಜೆ ತೂಕವನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ. 42.4 ಮೀಟರ್ ಎತ್ತರವಿರುವ ಜಿಎಸ್ಎಲ್ವಿ ಮಾರ್ಕ್ 3 ಉಪಗ್ರಹವು ಮೂರು ಹಂತಗಳನ್ನು ಹೊಂದಿದೆ.
ಪ್ರಸ್ತುತ ಉಡಾವಣೆ ಪ್ರಾಯೋಗಿಕ ಉಡಾವಣೆಯಾಗಿದ್ದು, ನೌಕೆಯು ನಭದಲ್ಲಿ ಸುಮಾರು 126 ಕಿ.ಮೀ ಮಾತ್ರ ಸಂಚರಿಸಲಿದೆ. ಬಳಿಕ ಅದು ಸಮುದ್ರದಲ್ಲಿ ಬೀಳಲಿದೆ. ಶ್ರೀಹರಿಕೋಟಾದಿಂದ ಸುಮಾರು 1600 ಕಿ.ಮೀ ದೂರದಲ್ಲಿ ನೌಕೆಯು ಬೀಳಲಿದ್ದು, ಅದನ್ನು ಮತ್ತೆ ಸತೀಶ್ ಧವನ್ ಉಡಾವಣಾ ಕೇಂದ್ರಕ್ಕೆ ತರಲಾಗುತ್ತದೆ. ಇದಕ್ಕಾಗಿ ಈಗಗಾಲೇ ಪ್ರತ್ಯೇಕ ತಂಡವೊಂದು ಸಿದ್ದವಾಗಿದ್ದು, ಉಡಾವಣೆಯಾದ ಸುಮಾರು 20 ನಿಮಿಷಗಳ ಬಳಿಕ ನೌಕೆಯು ಸಮುದ್ರಕ್ಕೆ ಬೀಳಲಿದೆ.
630 ಟನ್ ತೂಕದ ಈ ರಾಕೆಟ್ಗೆ ದ್ರವ ಹಾಗೂ ಘನ ಇಂಧನದ ಮೂಲಕ ಬಲ ತುಂಬಲಾಗುತ್ತದೆ. ಆದರೆ, ಕ್ರಯೋಜೆನಿಕ್ ಹಂತದ ಎಂಜಿನ್ ನಿಷ್ಕ್ರಿಯ ಸ್ಥಿತಿಯಲ್ಲಿ ಇರುತ್ತದೆ. 4 ಸಾವಿರ ಕೆ.ಜಿ. ತೂಕದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ದೇಶೀಯ ಕ್ರಯೋಜೆನಿಕ್ ಎಂಜಿನ್ ಅನ್ನು ಇಸ್ರೊ ಸಿದ್ಧಪಡಿಸುತ್ತಿದ್ದು, ಎರಡು ವರ್ಷದೊಳಗೆ ಅದು ಸಿದ್ಧವಾಗುವ ನಿರೀಕ್ಷೆಯಿದೆ. ‘ಜಿಎಸ್ಎಲ್ವಿ ಮಾರ್ಕ್–3’ಯ ಇತರ ಎಂಜಿನ್ಗಳು ಸಿದ್ಧವಾದ ಕಾರಣ ಇಸ್ರೊ ಪ್ರಾಯೋಗಿಕ ಪರೀಕ್ಷೆಗೆ ನಡೆಸಿದೆ.
ಈ ಪ್ರಾಯೋಗಿಕ ಉಡಾವಣೆಗೆ 155 ಕೋಟಿ ರೂಪಾಯಿ ವೆಚ್ಚವಾಗಿದ್ದು, ರಾಕೆಟ್ 126 ಕಿ.ಮೀ. ಎತ್ತರಕ್ಕೆ ಚಿಮ್ಮಲಿದೆ. ಮನುಷ್ಯರನ್ನು ಕೊಂಡೊಯ್ಯುವ ಅಂತರಿಕ್ಷ ನೌಕೆಯ ಮಾದರಿ 20 ನಿಮಿಷಗಳ ನಂತರ ಬಂಗಾಳ ಕೊಲ್ಲಿಯಲ್ಲಿ ಬೀಳಲಿದೆ. ದೈತ್ಯ ಕಪ್ ಕೇಕ್ನಂತೆ ಕಾಣುವ ಈ ಅಂತರಿಕ್ಷ ನೌಕೆಯ ಮಾದರಿ 3650 ಕೆ.ಜಿ ತೂಕದ್ದಾಗಿದೆ. 23 ಜನರು ಅದರಲ್ಲಿ ಕುಳಿತುಕೊಳ್ಳಬಹುದಾಗಿದೆ.
ಶ್ರೀಹರಿಕೋಟಾ ಕೇಂದ್ರದಿಂದ 1,600 ಕಿ.ಮೀ. ದೂರ ಸಮುದ್ರದಲ್ಲಿ ಬೀಳುವ ಅಂತರಿಕ್ಷ ನೌಕೆಯನ್ನು ಭಾರತೀಯ ನೌಕಾಪಡೆ ಇಸ್ರೊಗೆ ಮುಟ್ಟಿಸಲಿದೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಗೆ, ಚಂದ್ರ, ಮಂಗಳ ಇತ್ಯಾದಿ ಗ್ರಹಗಳ ಅಂಗಳದಲ್ಲಿ ಅಂತರಿಕ್ಷ ನೌಕೆಯನ್ನು ಇಳಿಸುವ ಯೋಜನೆಗೆ ಇದು ಮೊದಲ ಮೆಟ್ಟಿಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement