ಆ ಕರಾಳ(ಸುನಾಮಿ) ಘಟನೆ ಸಂಭವಿಸಿ ಇಂದಿಗೆ ಹತ್ತು ವರ್ಷಗಳು ಪೂರ್ಣಗೊಂಡಿವೆ.ಸುನಾಮಿಯ ಮಹಾ ಅಬ್ಬರಕ್ಕೆ ಸಾವಿರಾರು ಮುಗ್ಧ ಜನತೆ ಬಲಿಯಾಗಿದ್ದ ಕಹಿ ಘಟನೆ ಜನಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದುಕೊಂಡಿದೆ.
2004, ಡಿಸೆಂಬರ್ 26 ರಂದು ತಮಿಳುನಾಡಿನ ಕರಾವಳಿಯ ಜನತೆ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಅಂತೆಯೇ ಸಾವಿರಾರು ಮಂದಿ ಕ್ರಿಸ್ಮಸ್ ಆಚರಣೆಗೆಂದು ತಮಿಳುನಾಡಿನ ಸುಪ್ರಸಿದ್ದ ವೇಲಾಂಕಣಿ ಚರ್ಚ್ಗೆ ಆಗಮಿಸಿದ್ದರು.
ಸಮುದ್ರ ತೀರದತ್ತ ಏಕಾಏಕಿ ಧಾವಿಸಿದ್ದ ಭೂತಾಕಾರದ ಸುನಾಮಿ ಕರವಾಳಿಯಲ್ಲಿ ನೆಲೆಸಿದ್ದ, ಆಗಮಿಸಿದ್ದ, ಸಂಭ್ರಮಿಸುತ್ತಿದ್ದ ಸಾವಿರಾರು ಸಂಖ್ಯೆಯ ಮುಗ್ದ ಜನತೆಯನ್ನು ನೋಡನೋಡುತ್ತಲೆ ಬಲಿ ತೆಗೆದುಕೊಂಡಿತು.
ಇಂಡೊನೇಷಿಯಾದ ಸುಮಾತ್ರ ದ್ವೀಪದಲ್ಲಿ ಕಾಣಿಸಿಕೊಂಡಿದ್ದ ಸುನಾಮಿ ಎಂಬ ಮಹಾ ಅಲೆ ತನ್ನ ರುದ್ರಾವತಾರ ತಾಳಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಈ ಘಟನೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು.
ಪ್ರಾಣ ಹಾನಿ ಮಾತ್ರವಲ್ಲದೆ, ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಕಳೆದುಕೊಂಡು ಲಕ್ಷಾಂತರ ಜನ ಬೀದಿ ಪಾಲಾದರು. ಸುನಾಮಿ ಬಾಧಿತ ಪ್ರದೇಶಗಳಾದ ತಮಿಳುನಾಡಿನ ನಾಗಪಟ್ಟಣಂ, ಕಡಲೂರು ಇತ್ಯಾದಿ ಕಡೆಗಳಲ್ಲಿ ಸಂತ್ರಸ್ಥ ಶಿಬಿರಗಳನ್ನು ತೆರೆಯಲಾಗಿತ್ತು. ಜಾತಿ, ಮತ, ಧರ್ಮ, ಸಮುದಾಯ ಎಂಬ ಭೇದವಿಲ್ಲದೆ ದೇಶ ವಿದೇಶಗಳಿಂದ ನೆರವಿನ ಹಸ್ತ ಹರಿದುಬಂತು.
ಸುನಾಮಿ ಎಂಬ ಕಹಿ ಘಟನೆ ಸಂಭವಿಸಿ 10 ವರ್ಷಗಳಾದರೂ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ಪೋಷಕರು, ಕುಟುಂಬಸ್ಥರು, ಬಂಧು ಬಾಂಧವರನ್ನು ಕಳೆದುಕೊಂಡ ಲಕ್ಷಾಂತರ ಮಂದಿ, ಇನ್ನೂ ಆ ಕಹಿ ನೆನಪಿನಿಂದ ಹೊರಬಂದಿಲ್ಲ. ಅಲ್ಲದೇ ತಮ್ಮ ಹಿಂದಿನ ಸ್ಥಿತಿಗೆ ತೆರಳಲಾಗದೇ ನಲುಗುತ್ತಿದ್ದಾರೆ.
Advertisement