ಜಕಾರ್ತ: ಕಳೆದ ವಾರ ದುರಂತಕ್ಕೀಡಾದ ಏರ್ ಏಷ್ಯಾ ವಿಮಾನದ ಶೋಧಕಾರ್ಯ ಗುರುವಾರ ಕೂಡ ಮುಂದುವರೆದಿದ್ದು, ಇಂಡೋನೇಷ್ಯಾ ನೌಕಾಪಡೆಯ ಮುಳುಗು ತಜ್ಞರು ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ನಿನ್ನೆ ನಡೆದ ಶೋಧಕಾರ್ಯವನ್ನು ಪ್ರತಿಕೂಲ ಹವಾಮಾನದಿಂದಾಗಿ ಮೊಟಕುಗೊಳಿಸಲಾಗಿತ್ತು. ಆದರೆ ಇಂದು ವಾತಾವರಣ ತಿಳಿಯಾಗಿರುವುದರಿಂದ ಮತ್ತೆ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂಡೋನೇಷ್ಯಾದ ನೌಕಾಪಡೆಯ ನೂರಾರು ಯೋಧರು ಮತ್ತು ಮುಳುಗು ತಜ್ಞರು ಇದೀಗ ಸಮುದ್ರದಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ನಿನ್ನೆ ನಡೆದ ಶೋಧಕಾರ್ಯದ ವೇಳೆ 7 ಮಂದಿ ಪ್ರಯಾಣಿಕರ ಮೃತ ದೇಹ ದೊರೆತಿದ್ದು, ಮೃತದೇಹಗಳನ್ನು ಅವರ ಅವರ ಸ್ವಂತ ಊರುಗಳಿಗೆ ರವಾನೆ ಮಾಡಲಾಗಿದೆ. ಸೊರಬಯಗೆ 2, ಬರ್ನಿಯೋ ದ್ವೀಪಕ್ಕೆ 4 ಮೃತದೇಹವನ್ನು ರವಾನೆ ಮಾಡಲಾಗಿದೆ. ಮತ್ತೊಂದು ಮೃತದೇಹ ಶಿಪ್ ನಲ್ಲಿ ಆಗಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಂಡೋನೇಷ್ಯಾದ ವಾಯದಳ ಮುಖ್ಯಸ್ಥ ಮಾರ್ಷಲ್ ಅಗಸ್ ದ್ವಿಪುಟ್ರಾಂಟೋ ಅವರು ಮಾತನಾಡಿ, ಇಂದು ವಾತಾವರಣ ತಿಳಿಯಾಗಿದ್ದು, ಕಾರ್ಯಾಚರಣೆ ನಡೆಸಲು ಅಡ್ಡಿ ಇಲ್ಲ. ವಾಯುದಳದ ಸಂಪೂರ್ಣ ಸಾಮರ್ಥ್ಯದೊಂದಿಗೆ ಶೋಧಕಾರ್ಯ ನಡೆಸುತ್ತೇವೆ ಎಂದು ಹೇಳಿದ್ದಾರೆ. ನೌಕಾದಳದ ಹೆಲಿಕಾಪ್ಟರ್ಗಳು, ವಾಯುದಳದ ಆತ್ಯಾಧುನಿಕ ವಿಮಾನಗಳು ಮತ್ತು ಯುದ್ಧನೌಕೆಗಳು ಸಮುದ್ರತಳದಲ್ಲಿರುವ ವಿಮಾನ ಮತ್ತು ಉಳಿದ 155 ಮೃತದೇಹಗಳಿಗಾಗಿ ಶೋಧ ನಡೆಸುತ್ತಿವೆ.
Advertisement