ಬುರ್ದ್ವಾನ್ ಸ್ಫೋಟ ಮಾಸ್ಟರ್ ಮೈಂಡ್ ಹುಡುಕಿ ಕೊಟ್ಟ 'ಕೊರಿಯರ್‌'

ಕೊರಿಯರ್ ಒಂದು ಬುರ್ದ್ವಾನ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ಹುಡುಕಿಕೊಟ್ಟಿದ್ದು, ಸಾಜಿದ್ ಆಕಾ ಶೇಖ್ ರೆಹಮತ್ ಉಲ್ಲಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುರ್ದ್ವಾನ್‌ನಲ್ಲಿರುವ ನೂರುಲ್ ಹಸನ್ ಚೌದರಿ ಅವರ ಸ್ಫೋಟಗೊಂಡ ಮನೆ
ಬುರ್ದ್ವಾನ್‌ನಲ್ಲಿರುವ ನೂರುಲ್ ಹಸನ್ ಚೌದರಿ ಅವರ ಸ್ಫೋಟಗೊಂಡ ಮನೆ
Updated on

ಕೊಲ್ಕತಾ: ಕೊರಿಯರ್ ಒಂದು ಬುರ್ದ್ವಾನ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ಹುಡುಕಿಕೊಟ್ಟಿದ್ದು, ಪಶ್ಚಿಮ ಬಂಗಾಳ ಪೊಲೀಸರು ಸಾಜಿದ್ ಆಕಾ ಶೇಖ್ ರೆಹಮತ್ ಉಲ್ಲಾ ಎಂಬಾತನನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

ಬಾಂಗ್ಲಾದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆಯಾಗಿರುವ ಇಂಡಿಯಾ ಮಾಡ್ಯುಲ್ ಆಫ್ ಜಮಾತ್ ಸಂಘಟನೆ ಮುಖ್ಯಸ್ಥ ಸಾಜಿದ್ ಖಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲ್ಕತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರು ಜೆಸ್ಸೂರ್ ರಸ್ತೆಯಲ್ಲಿ ಈತನನ್ನು ಬಂಧಿಸಲಾಗಿದೆ. ಕೊರಿಯರ್ ಒಂದು ನೀಡಿದ ಮಾಹಿತಿಯ ಸಹಾಯದಿಂದ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈತನ ಮೇಲೆ ಮೊದಲಿನಿಂದಲೂ ಸಂಶಯ ವ್ಯಕ್ತಪಡಿಸಿದ್ದ ಬಿದ್ದನ್ ನಗರ ಪೊಲೀಸರು, ಅನುಮಾನಾಸ್ಪದ ಕೊರಿಯರ್ ಒಂದರ ಜಾಡು ಹಿಡಿದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನಾಮಧೇಯ ವ್ಯಕ್ತಿಯೊಬ್ಬರು ಕೊರಿಯರ್‌ನಲ್ಲಿ ಸಾಜಿದ್‌ಗೆ ಹಣ ರವಾನೆ ಮಾಡುತ್ತಿದ್ದು, ಇದನ್ನು ಗಮನಿಸಿದ ಪೊಲೀಸರು ಕೊರಿಯರ್ ಅನ್ನು ಹಿಂಬಾಲಿಸಿದಾಗ ಸಾಜಿದ್ ಸಿಕ್ಕಿಹಾಕಿಕೊಂಡಿದ್ದಾನೆ. ಬಂಧಿತನಿಂದ ಭಾರತದ ವೋಟರ್ ಐಡಿ ಮತ್ತು ಪ್ಯಾನ್ ಕಾರ್ಡ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬಂಧಿತ ಸಾಜಿದ್ ಖಾನ್ ಜಮಾತ್-ಉಲ್-ಮುಜಾಹಿದ್ದಿನ್ ಉಗ್ರ ಸಂಘಟನೆಯ ಮುಖ್ಯಸ್ಥ ಎಂದು ತಿಳಿದುಬಂದಿದ್ದು, ಭಾರತದ ಗಡಿಯಲ್ಲಿನ ಮದರಸಾಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟು, ಅಲ್ಲೇ ಅವುಗಳನ್ನು ತಯಾರಿ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಸಾಜಿದ್ ಖಾನ್ ಮೂಲತಃ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದುಬಂದಿದ್ದು, ಇಂಡಿಯಾ ಮಾಡ್ಯುಲ್ ಆಫ್ ಜಮಾತ್ ಉಗ್ರ ಸಂಘಟನೆಯಲ್ಲಿ ಯುವಕ-ಯುವತಿಯರಿಗೆ ತರಬೇತಿ ನೀಡುತ್ತಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಕಳೆದ ಆಗಸ್ಟ್ 2ರಂದು ಟಿಎಂಸಿ ಮುಖಂಡನ ಮನೆಯಲ್ಲಿ ಸ್ಫೋಟಗೊಂಡ ಬಾಂಬಿಗೆ ಬೇಕಾದ ಪರಿಕರಗಳನ್ನು ಈತನೇ ಒದಗಿಸಿದ್ದ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳ ಮತ್ತು ಭಾರತದ ಗಡಿ ರಾಜ್ಯಗಳಲ್ಲಿನ ರಾಜಕೀಯ ಮುಖಂಡರ ಸಂಪರ್ಕ ಬೆಳೆಸಿಕೊಂಡಿದ್ದ ಸಾಜಿದ್ ಖಾನ್, ಅವರ ನೆರವಿನಿಂದಾಗಿಯೇ ತನ್ನ ಕುಕೃತ್ಯ ಮುಂದುವರೆಸಿದ್ದ. ಇದಕ್ಕೆ ಸ್ಪಷ್ಟ ನಿದರ್ಶನ ಬುರ್ದ್ವಾನ್ ಸ್ಫೋಟ ಪ್ರಕರಣ.

ಕಳೆದ ಅಕ್ಟೋಬರ್ 2 ಗುರುವಾರದಂದು ಟಿಎಂಸಿ ಮುಖಂಡ ನೂರುಲ್ ಹಸನ್ ಚೌದರಿ ಅವರ ಬುರ್ದ್ವಾನ್ ನಿವಾಸದಲ್ಲಿ ಐಇಡಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಹಲವರು ಮೃತಪಟ್ಟಿದ್ದರು. ಬಳಿಕ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಎನ್‌ಐಎ ತಂಡ ಸ್ಫೋಟಕ ಮಾಹಿತಿಯನ್ನು ಹೊರಹಾಕಿತ್ತು. ಅದೇನೆಂದರೆ ಮನೆಯಲ್ಲೇ ಐಇಡಿ ಬಾಂಬ್ ತಯಾರಿಸುವ ವೇಳೆ ಅಚಾತುರ್ಯವಾಗಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಸಾವನ್ನಪ್ಪಿರುವವರು ಕೂಡ ಶಂಕಿತ ಉಗ್ರರು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿತ್ತು.

ಅಂತೆಯೇ ಕೂಡಲೇ ಟಿಎಂಸಿ ಮುಖಂಡ ನೂರುಲ್ ಹಸನ್ ಚೌದರಿ ಮತ್ತು ಆತನ ಪತ್ನಿ ಸೇರಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಪೊಲೀಸರು ವಶಕ್ಕೆ ಪಡಿಸಿಕೊಂಡಿರುವ ಸಾಜಿದ್ ಖಾನ್ ಪಶ್ಚಿಮ ಬಂಗಾಳ ಮತ್ತು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಮದರಸಾಗಳಲ್ಲಿ ಸ್ಫೋಟಕಗಳನ್ನು ತಯಾರಿಸಿ ಭಾರತದ ವಿರುದ್ಧ ಬಳಕೆ ಮಾಡಲು ಹುನ್ನಾರ ನಡೆಸಿದ್ದನು. ಈ ಹಿಂದೆ ಗಡಿಯಲ್ಲಿ ದಾಳಿ ನಡೆಸಿದ್ದ ಎನ್‌ಐಎ ತನಿಖಾ ತಂಡ ಮಹಿಳಾ ಮದರಸಾಗಳಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com