257 ಕೋಟಿ ಭೂಮಿ ವಶ

ಭೂ ಒತ್ತುವರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ...
257 ಕೋಟಿ ಭೂಮಿ ವಶ

ಬೆಂಗಳೂರು; ಭೂ ಒತ್ತುವರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಜಿಲ್ಲಾಡಳಿತ ನಗರದ ವಿವಿಧೆಡೆ  ಒಂದೇ ದಿನದಲ್ಲಿ 257ಕೋಟಿ ಮೌಲ್ಯದ 74.9 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ.

ಜಿಲ್ಲಾಧಿಕಾರಿ ವಿ.ಶಂಕರ್ ಸೂಚನೆ ಮೇರೆಗೆ ಉತ್ತರ (ಅಪರ) ದಕ್ಷಿಣ, ಪೂರ್ವ, ಉತ್ತರ ಹಾಗೂ ಅನೇಕಲ್ ತಾಲೂಕುಗಳಲ್ಲಿ ಶನಿವಾರ ಒತ್ತುವರಿ ತೆರವುಗೊಳಿಸಲಾಗಿದೆ.

ಉತ್ತರ ತಾಲೂಕಿನ (ಅಪರ) ಮಾರೇನಹಳ್ಳಿಯ ಸರ್ವೆ ನಂ.173/ಪಿ9 ನಲ್ಲಿ 2.10 ಎಕರೆ, 200/ಪಿ56ನಲ್ಲಿ 2 ಎಕರೆ, 200/ಪಿ1ನಲ್ಲಿ 2 ಎಕರೆ, 58/ಪಿ11 ರಲ್ಲಿ 2.20 ಎಕರೆ, ಮೀಸಗಾನಹಳ್ಳಿಯ 35/ಪಿ1ನಲ್ಲಿ 2 ಎಕರೆ ಸೇರಿದಂತೆ ಒಟ್ಟು 57.21 ಎಕರೆ ಭೂಮಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ತಹಸೀಲ್ದಾರ್ ಬಾಳಪ್ಪ ಹತಗುಂದಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಈ ಭೂಮಿ 150 ಕೋಟಿ ಮೌಲ್ಯ ಹೊಂದಿದೆ.

ದಕ್ಷಿಣ ತಾಲೂಕಿನ ಕದಿರೇನಹಳ್ಳಿಯ ಸ.ನಂ.55ರಲ್ಲಿ 18 ಗುಂಟೆ, ಭೀಮನಕುಪ್ಪೆ ಗ್ರಾಮದ ಸ.ನಂ.73ರಲ್ಲಿ 30 ಗುಂಟೆ ವಶಕ್ಕೆ ಪಡೆಯಲಾಗಿದೆ. ಒತ್ತುವರಿಯಾದ ಈ ಭೂಮಿ ಖಾಲಿ ಜಾಗವಾಗಿದ್ದು, ಇದರ ಮೌಲ್ಯ 55 ಕೋಟಿ. ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ನೇತೃತ್ವದಲ್ಲಿ ಭೂಮಿ ವಶಕ್ಕೆ ಪಡೆಯಲಾಯಿತು.

ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಲಿಯ ಬೊಮ್ಮೇನಹಳ್ಳಿಯಲ್ಲಿ ಸ.ನಂ.195, 196ರಲ್ಲಿ 2.34 ಎಕರೆ 'ಬಿ' ಖರಾಬು ಭೂಮಿಯನ್ನು ಅಪಾರ್ಟ್ಮೆಂಟ್ ನಿರ್ಮಿಸಲು ಪ್ರೆಸ್ಟೀಜ್ ಗ್ರೂಪ್ ಒತ್ತುವರಿ ಮಾಡಿದ್ದು, ವಶಕ್ಕೆ ಪಡೆಯಲಾಗಿದೆ.

ಮಹದೇವಪುರದ ಸರ್ವೆ ನಂ.82ರಲ್ಲಿ ಕೃಷ್ಣಪ್ಪ, ಯರ್ರಪ್ಪ, ಜಯಮ್ಮ, ರಾಮಯ್ಯ, ಹೂಡಿಯ ಸ.ನಂ.29ರಲ್ಲಿ 1 ಎಕರೆ ಸರ್ಕಾರಿ ಗೋಮಾಳ ಜಮೀನು ಸೇರಿದಂತೆ ಒಟ್ಟು 4.34 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಜಮೀನಿನ ಮೌಲ್ಯ ಅಂದಾಜು 30 ಕೋಟಿ, ತೆರವುಗೊಳಿಸಲು ತಹಸೀಲ್ದಾರ್ ಹರೀಶ್ ನಾಯ್ಕ್ ನಿರ್ದೇಶನ ನೀಡಿದ್ದರು.

ಆನೇಕಲ್ ನ ಅತ್ತಿಬೆಲೆಯ ಗುಡ್ಡದಹಟ್ಟಿಯಲ್ಲಿ ಸ.ನಂ.33ರಲ್ಲಿ 3.17 ಎಕರೆ, ಯಾದವನಹಳ್ಳಿಯ ಸ.ನಂ.76ರಲ್ಲಿ 4.12 ಎಕರೆ, ಜಿಗಣಿ ಹೋಬಳಿ ಮಂಟಪ ಗ್ರಾಮದ ಸ.ನಂ. 159ರಲ್ಲಿ 1.30 ಎಕರೆ, ಸರ್ಕಾರಿ ಕೆರೆ ಜಮೀನು ಸೇರಿದಂತೆ ಒಟ್ಟು 15 ಕೋಟಿ ಮೌಲ್ಯದ ಭೂಮಿ ವಶಕ್ಕೆ ಪಡೆಯಲಾಗಿದೆ. ತಹಸೀಲ್ದಾರ್ ಅನಿಲ್ ಕುಮಾರ್ ನೇತೃತ್ವ ವಹಿಸಿದ್ದರು.

ಉತ್ತರ ತಾಲೂಕಿನ ದಾಸನಪುರ ಹೋಬಳಿ ಲಕ್ಷ್ಮಿಪುರ ಗ್ರಾಮದ ಸ.ನಂ.88ರಲ್ಲಿ 7 ಕೋಟಿ ಮೌಲ್ಯದ 1.05 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ತಹಸೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ತೆರವು ಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com