ಭೋಪಾಲ್: ಮಧ್ಯಪ್ರದೇಶದ ಮೊರೆನಾದ ಮರಳು ಮಾಫಿಯಾಗೆ ತಡೆ ಒಡ್ಡಲು ಯತ್ನಿಸಿದ ಪೊಲೀಸ್ ಮುಖ್ಯಪೇದೆ ಮೇಲೆ ಲಾರಿ ಹತ್ತಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ಮಾಫಿಯಾಕ್ಕೆ ಇಂದು ಮತ್ತೊಂದು ಬಲಿಯಾಗಿದ್ದು, ಅಕ್ರಮ ತಡೆಯಲು ಹೋದ ಮುಖ್ಯಪೇದೆ ಧರ್ಮೇಂದ್ರ ಸಿಂಗ್ ಚೌಹಾಣ್ ಅವರ ಮೇಲೆ ಲಾರಿ ಹತ್ತಿಸಿದ ಪರಿಣಾಮ, ಪೇದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಬೆಳಗ್ಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳ ವಿರುದ್ಧ ಕಾರ್ಯಾಚರಣೆಗಾಗಿ ನಿಯೋಜಿತಗೊಂಡಿದ್ದ ನೂರಬಾದ್ ಪೊಲೀಸ್ ಠಾಣೆಯ ಮುಖ್ಯಪೇದೆ ಧರ್ಮೇಂದ್ರ ಸಿಂಗ್ ಚೌಹ್ವಾಣ್ ಮೇಲೆ ಲಾರಿ ಹಾಯಿಸಲಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಚೌಹ್ವಾಣ್ ಮೃತಪಟ್ಟ ಬಳಿಕ ಲಾರಿಯನ್ನು ಅಲ್ಲೇ ಬಿಟ್ಟ ಚಾಲಕ ಪರಾರಿಯಾಗಿದ್ದಾನೆ.
ದಹನೆಲ್ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಮಾಡಿದ ಚೌಹಾಣ್, ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಪೊಲೀಸ್ ದಾಳಿಯಿಂದ ಹೆದರಿದ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಹಿಮ್ಮುಖವಾಗಿ ಲಾರಿ ಓಡಿಸಿದಾಗ, ಹಿಂದೆ ಬರುತ್ತಿದ್ದ ಚೌಹಾಣ್ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement