ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ನಡೆಯುತ್ತಿದ್ದು, ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಏನು ಇಲ್ಲ ಎಂದು ವಿಶೇಷ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಬಹುಕೋಟಿ 2ಜಿ ಹಗರಣದ ಅಂತಿಮ ವಿಚಾರಣೆ ವೇಳೆ ಅಧಿಕಾರಿಗಳು, 2ಜಿ ಹಗರಣದಲ್ಲಿ ಡಾ. ಮನಮೋಹನ್ ಸಿಂಗ್ ಪಾತ್ರ ಕಾಣುತ್ತಿಲ್ಲ. ಹಂಚಿಕೆ ನಿಯಮಗಳ ಬಗ್ಗೆ ಅಂದಿನ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರು ಸಿಂಗ್ ಅವರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದರು. ಕೆಲವು ಕಂಪನಿಗಳಿಗೆ ರಾಜಾ ಅವರು ಅಕ್ರಮವಾಗಿ ತರಂಗಾಂತರ ಹಂಚಿಕೆ ಮಾಡಿದ್ದು, ಅಕ್ರಮ ಹಂಚಿಕೆ ಬಗ್ಗೆ ರಾಜಾ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ಹೇಳಿದ್ದಾರೆ.
2ಜಿ ಹಗರಣದ ಎಲ್ಲ ಕೇಸ್ಗಳ ವಿಚಾರಣೆ ನಡೆಸುತ್ತಿರುವ ಸ್ಪೆಷಲ್ ಸಿಬಿಐ ನ್ಯಾಯಾಧೀಶ ಒ.ಪಿ. ಸಹನಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ ಬಳಿಕ ಇಂದಿಗೆ ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. 2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಯನ್ನು 2011ರ ನ.11ಕ್ಕೆ ಆರಂಭಿಸಲಾಗಿತ್ತು.
122 ಪರವಾನಿಗೆ ನೀಡುವ ವೇಳೆ ಸುಮಾರು ರು.30,984 ಕೋಟಿ ನಷ್ಟವಾಗಿದೆ ಎಂದು ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಸಿಬಿಐ ಇಲ್ಲಿಯವೆರೆಗೆ ಸುಮಾರು 154 ಸಾಕ್ಷಿಗಳ ವಿಚಾರಣೆ ನಡೆಸಿದೆ. ಆರೋಪಿಗಳ ಪರ ಸುಮಾರು 29 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ 1.76 ಲಕ್ಷ ಕೋಟಿ ಮೌಲ್ಯದ 2ಜಿ ತರಂಗಾಂತರ ಹಂಚಿಕೆ ಅವ್ಯವಹಾರ ನಡೆದಿತ್ತು.
Advertisement