ರಾಂಪುರ್: ಸರ್ಕಾರ ಮನೆಗಳನ್ನು ತೆರವುಗೊಳಿಸಲಿದೆ ಎಂಬ ಭಯದಿಂದ ತಮ್ಮ ಮನೆಯನ್ನು ಉಳಿಸಿಕೊಳ್ಳುವ ಸಲುವಾಗಿ ಬರೋಬ್ಬರು 800 ಕ್ಕೂ ಹೆಚ್ಚು ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರ ಪ್ರದೇಶ, ರಾಂಪುರದ ವಾಲ್ಮೀಕಿ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ.
ರಾಂಪುರದ ವಾಲ್ಮೀಕಿ ಕಾಲೋನಿಯಲ್ಲಿರುವ ಸ್ಥಳೀಯ ನಿವಾಸಿಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿನ ನಗರ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿರುವ ಎಲ್ಲಾ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದರು. ಅಲ್ಲದೆ, ಸ್ಥಳೀಯರಿಗೆ ಕೆಲವು ದಿನಗಳ ಹಿಂದೆ ನೋಟಿಸ್ ಜಾರಿ ಮಾಡಿ, ಎಲ್ಲಾ ಮನೆಗಳ ಗೋಡೆಗಳ ಮೇಲೆ ಮನೆ ತೆರವುಗೊಳಿಸಲಾಗುವುದು ಎಂದು ಕೆಂಪು ಬಣ್ಣದಲ್ಲಿ ಸೂಚನೆಗಳನ್ನು ಬರೆದಿದ್ದರು.
ಇದಕ್ಕೆ ಹೆದರಿದ ಅಲ್ಲಿನ ಸ್ಥಳೀಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಮನೆಗಳನ್ನು ಉಳಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಅಂಬೇಡ್ಕರ್ ಜಯಂತಿ ದಿನವಾದ ನಿನ್ನೆ ಮುಸ್ಲಿಂ ಧರ್ಮ ಗುರುವೊಬ್ಬ ಸಮಕ್ಷಮದಲ್ಲಿ ವಾಲ್ಮೀಕಿ ಕಾಲೋನಿಯಲ್ಲಿದ್ದ ಸುಮಾರು 800ಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದಾರೆ.
ಮೂಲಗಳ ಪ್ರಕಾರ ಮನೆಗಳನ್ನು ತೆರವುಗೊಳಿಸಿದ ನಂತರ ಆ ಜಾಗದಲ್ಲಿ ಮಾಲ್ ಒಂದನ್ನು ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಈ ಶಾಪಿಂಗ್ ಮಾಲ್ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಅಜಂ ಖಾನ್ ಮುಸ್ಲಿಮರಾಗಿರುವುದರಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಮನೆಗಳನ್ನು ಉಳಿಸಿಕೊಳ್ಳಸಿಕೊಳ್ಳಬಹುದು ಎಂಬ ಉದ್ದೇಶದಿಂದ ಅಲ್ಲಿನ ಸ್ಥಳೀಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ಈ ಕುರಿತಂತೆ ರಾಂಪುರ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ತ್ರಿಪಾಠಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಯಾರೇ ಆಗಲಿ, ಯಾವುದೇ ಸಮುದಾಯದ ಜನವಾದರೂ ಸರಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲಾಗುತ್ತದೆ. ಜನರು ಮತಾಂತರಗೊಂಡ ಮಾತ್ರಕ್ಕೆ ಕಾನೂನು ಬಾಹಿರವಾಗಿ ನಿರ್ಮಿತಗೊಂಡಿರುವ ಮನೆಗಳನ್ನು ಬಿಡಲು ಸಾಧ್ಯವಿಲ್ಲ. ಸರ್ಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಬಳಕೆ ಮಾಡುವ ಯಾವುದೇ ಜನಾಂಗವಾದರೂ ಸರಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಜಂಖಾನ್ ಅವರ ಮಾಧ್ಯಮ ವಕ್ತಾರ ಫಸಾತ್ ಅಲಿಖಾನ್ ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಲ್ಲಿನ ಸ್ಥಳೀಯರೊಬ್ಬರು, ಕೆಲವು ದಿನಗಳ ಹಿಂದೆ ನಗರಸಭೆಯ ಅಧಿಕಾರಿಯೊಬ್ಬರು ಬಂದು ಮನೆಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿದರು. ಇದಕ್ಕೆ ನಾವು ಒಪ್ಪಿಗೆ ನೀಡದೆ ಆಗುವುದಿಲ್ಲ ಎಂದೆವು. ನಂತರ ಆ ಅಧಿಕಾರಿ ಮತಾಂತರಗೊಂಡರೆ ನಿಮ್ಮ ಮನೆಗಳನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು. ಅಧಿಕಾರಿಯ ಈ ಮಾತು ಕೇಳಿದ ನಾವು ಮನೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಮತಾಂತರಗೊಳ್ಳಲು ನಿರ್ಧಾರ ಕೈಗೊಂಡೆವು ಎಂದು ಹೇಳಿದ್ದಾರೆ.
Advertisement