ಎನ್‍ಡಿಎ ಸಂಭ್ರಮ ಸರಳವಾಗಿ ಆಚರಣೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ 25ಕ್ಕೆ ವರ್ಷ ಪೂರ್ಣಗೊಳ್ಳಲಿದೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ 25ಕ್ಕೆ ವರ್ಷ ಪೂರ್ಣಗೊಳ್ಳಲಿದೆ. ಈ ಒಂದು ವರ್ಷದ ಆಡಳಿತಾವಧಿಯಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತಂದ ಮೆಚ್ಚುಗೆ, ಭ್ರಷ್ಟಾಚಾರಕ್ಕೆ ಬಹುತೇಕ ಕಡಿವಾಣ ಹಾಕಿದ ಸಾಧನೆ ಮಾಡಿದ್ದರೂ ಸರ್ಕಾರ ಮಾತ್ರ ಈ ಸಂಭ್ರಮವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ.

ಜತೆಗೆ, ಸರ್ಕಾರದ ರೈತ ಹಾಗೂ ಬಡವರ ಪರ ಯೋಜನೆಗಳು ಯಾವ ರೀತಿ ಗ್ರಾಮೀಣರು, ಕೆಳಮಧ್ಯಮ ವರ್ಗದ ಜನರ ಭವಿಷ್ಯ ಬದಲಿಸಿದೆ ಎನ್ನುವುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಸಂದರ್ಭವನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳು ಎಷ್ಟು ಮಂದಿ ಬಡವರು, ರೈತರು, ಮಹಿಳೆಯರು ಹಾಗೂ ರೈತರಿಗೆ ಭರವಸೆಯ ಬೆಳಕಾಯಿತು ಎನ್ನುವುದೇ ಮೊದಲ ವರ್ಷಾಚರಣೆಯ ಮುಖ್ಯ ಧ್ಯೇಯವಾಗಬೇಕು. ಅದರಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿಗಳು, ಸಂಪುಟ ಕಾರ್ಯದರ್ಶಿಗಳಿಗೆ ಈ ಸಂಬಂಧ ಪತ್ರವೊಂದನ್ನು ರವಾನಿಸಿದೆ.

ಆದರೆ, ಪ್ರಧಾನಿ ಕಾರ್ಯಾಲಯ ಕಳುಹಿಸಿರುವ ಪತ್ರದಲ್ಲಿ ಸರ್ಕಾರದ ಆರ್ಥಿಕ ಸುಧಾರಣಾ ನೀತಿಗಳು, ಹೂಡಿಕೆ ಉತ್ತೇಜನಕ್ಕೆ ಕೈಗೊಂಡ ಕ್ರಮಗಳು, 2015ರಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎನ್ನುವ ಹೆಮ್ಮೆಯ ವಿಚಾರಗಳ ಕುರಿತು ಯಾವುದೇ ಮಾಹಿತಿ ನೀಡದಿರುವುದು ಅಚ್ಚರಿ ಮೂಡಿಸಿದೆ.

ಯಾಕೆ?: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಬಳಿಕ ಸರ್ಕಾರ ಬಡವರ ವಿರೋಧಿ ಎನ್ನುವ ಭಾವನೆಯನ್ನು ಪ್ರತಿಪಕ್ಷಗಳು ಜನರಲ್ಲಿ ಬಿಂಬಿಸಲು ಹೊರಟಿವೆ.  ಬಿಜೆಪಿ ಕೇವಲ ಉದ್ದಿಮೆದಾರರ ಪರವಾಗಿದೆ. ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಈಗಾಗಲೇ ಆಂದೋಲನವನ್ನೂ ಆರಂಭಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಂಸತ್ತಿನಲ್ಲೂ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಇಂಥ ಪರಿಸ್ಥಿತಿಯಲ್ಲಿ ಎನ್ ಡಿಎ ಸರ್ಕಾರದ ಯೋಜನೆಗಳು ಯಾವ ರೀತಿ ಗ್ರಾಮೀಣರು, ಬಡವರು ಮತ್ತು ರೈತರ ಪರವಾಗಿವೆ ಎನ್ನುವುದನ್ನು ಜನರಿಗೆ ತಿಳಿಸಿಕೊಡುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಇದಕ್ಕಾಗಿ ವರ್ಷಾಚರಣೆ ಸಂಭ್ರಮವನ್ನು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಆಚರಿಸುವುದು ಬೇಡ. ಜನರಿಗೆ ಸರ್ಕಾರದ ಸಾಧನೆಯ ಮಾಹಿತಿಯನ್ನಷ್ಟೇ ನೀಡೋಣ ಎಂದೂ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com