ನವದೆಹಲಿ: ಅಕಾಲಿಕ ಮಳೆಯಿಂದ ತತ್ತರಿಸಿರುವ ದೇಶದ ಅನ್ನದಾತರಿಗೆ ಮತ್ತೊಂದು ಕಹಿ ಸುದ್ದಿ. ಈ ಬಾರಿ ಮುಂಗಾರು ಮಳೆ ಪ್ರಮಾಣ ಸರಾಸರಿಗಿಂತ ಕಡಿಮೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.
2015ರ ಹವಾಮಾನ ವರದಿ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ಅವರು, ಈ ಬಾರಿ ಜೂನ್ ನಿಂದ ಸೆಪ್ಟಂಬರ್ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದರು.
ಈ ವರ್ಷ ಶೇ. 33ರಷ್ಟು ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಶೇ. 28 ರಷ್ಟು ಮುಂಗಾರು ಮಳೆಯಾಗೋ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಸುರಿದ ಅಕಾಲಿಕ ಮಳೆಯಿಂದ ದೇಶದ ಹಲವೆಡೆ ಬೆಳೆದಿದ್ದ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1997 ರಿಂದ 2006 ರವೆರೆಗೂ ಸಹಜವಾದ ಮಾನ್ಸೂನ್ ಮಳೆಯಾಗಿತ್ತು. ಆದರೆ ಈ ಬಾರಿ ಪೂರ್ವ ಹಾಗೂ ಮಧ್ಯ ಫೆಸಿಫಿಕ್ ಸಾಗರದಲ್ಲಿ ಅಸ್ವಾಭಾವಿಕ ತಾಪಮಾನ ಭಾರತೀಯ ಮಾನ್ಸೂನ್ ಮಳೆ ಮೇಲೆ ಪರಿಣಾಮ ಬೀರಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಸೂಚಿಸಿವೆ ಎಂದು ಸಚಿವರು ತಿಳಿಸಿದ್ದಾರೆ.
ಖಾಸಗಿ ಹವಾಮಾನ ಇಲಾಖೆ ಸ್ಕೈಮಟ್ ಈ ವರ್ಷ ಸಾಧಾರಣ ಮಳೆಯಾಗಲಿದೆ ಎಂದು ವರದಿ ನೀಡಿದೆ. ಕಳೆದ ವರ್ಷ ಕೇವಲ ಶೇ. 11.9ರಷ್ಟು ಮಾನ್ಸೂನ್ ಮಳೆಯಾಗಿತ್ತು. ಇದರಿಂದ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement