ರೈತ ಆತ್ಮಹತ್ಯೆ ವೇಳೆ ಭಾಷಣ, ಜನತೆಯ ಕ್ಷಮೆಯಾಚಿಸಿದ ದೆಹಲಿ ಸಿಎಂ

ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿಯ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಜೀವನದ ಅತ್ಯಂತ ನೋವಿನ ಕ್ಷಣ ಎಂದಿರುವ ದೆಹಲಿ....
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿಯ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಜೀವನದ ಅತ್ಯಂತ ನೋವಿನ ಕ್ಷಣ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ತಾವು ಭಾಷಣ ಮುಂದುವರಿಸಿದ್ದಕ್ಕಾಗಿ ಜನತೆಯ ಕ್ಷಮೆಯಾಚಿಸಿದ್ದಾರೆ.

ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ಇಂದು ದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ರೈತನ ಆತ್ಮಹತ್ಯೆ ನನ್ನ ಜೀವನದ ಅತ್ಯಂತ ನೋವಿನ ಕ್ಷಣ. ರ್ಯಾಲಿಯಲ್ಲಿ ನಾನು ಭಾಷಣ ಮುಂದುವರೆಸಬಾರದಾಗಿತ್ತು. ಮತನಾಡಿದ್ದು ತಪ್ಪಾಗಿದೆ. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

ನಾನು ಭಾಷಣ ಮಾಡುತ್ತಿದ್ದ ವೇದಿಕೆಯಿಂದ ರೈತ ಏರಿದ್ದ ಮರ ಸ್ವಲ್ಪ ದೂರದಲ್ಲಿತ್ತು. ಹೀಗಾಗಿ ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿಯಲಿಲ್ಲ. ಆದರೆ ದೆಹಲಿ ಪೊಲೀಸರು ಸಹ ಆ ಬಗ್ಗೆ ಯಾವುದೇ ಮಾಹಿತಿ ನೀಡದೇ ಸುಮ್ಮನಿದ್ದರು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅಲ್ಲದೆ ಆರೋಪ ಪ್ರತ್ಯಾರೋಪ ಮಾಡುವ ಸಮಯ ಇದಲ್ಲ. ಹೀಗಾಗಿ ನಾನು ದೆಹಲಿ ಪೊಲೀಸರನ್ನು ದೂಷಿಸಲು ಬಯಸುವುದಿಲ್ಲ. ಅವರ ಕೆಲಸವನ್ನು ಅವರು ಮಾಡಿದ್ದಾರೆ ಎಂದಿದ್ದಾರೆ.

ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ನಾನು 1 ಗಂಟೆ ಮಾತನಾಡಬೇಕೆಂದಿದ್ದೆ. ಆದರೆ ಈ ಘಟನೆಯಿಂದಾಗಿ ಕೇವಲ 15 ನಿಮಿಷಗಳಿಗೆ ನನ್ನ ಭಾಷಣವನ್ನು ಮೊಟಕುಗೊಳಿಸಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಮಾಧ್ಯಮಗಳಲ್ಲಿ ತನಿಖೆಯ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ರೈತನ ಸಾವಿನ ಕುರಿತು ಯಾರೂ ಚರ್ಚಿಸುತ್ತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com