ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದ ಆರೋಪಿ, ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರ ಪಾಸ್ಪೋರ್ಟ್ ಸೀಜ್ ಮಾಡದ ಸಿಬಿಐಗೆ ವಿಶೇಷ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಹುಕೋಟಿ ಕಲ್ಲಿದ್ದಲು ಹಗರಣ ಸಂಬಂಧ ನವೀನ್ ಜಿಂದಾಲ್, ಮಾಜಿ ಸಚಿವ ದಾಸರಿ ನಾರಾಯಣರಾವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡ ಸೇರಿದಂತೆ 14 ಆರೋಪಿಗಳ ವಿರುದ್ಧ ಸಿಬಿಐ ನಿನ್ನೆ ಚಾರ್ಜ್ಶೀಟ್ ಸಲ್ಲಿಸಿದ್ದು, ಇಂದಿನಿಂದ ಸಿಬಿಐ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಆರಭಂವಾಗಿದೆ.
ವಿಚಾರಣೆ ವೇಳೆ ನವೀನ್ ಜಿಂದಾಲ್ ಪಾಸ್ಪೋರ್ಟ್ ಸೀಜ್ ಮಾಡದ ಸಿಬಿಐ ಕ್ರಮವನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಭರತ್ ಪರಾಶರ್ ಅವರು, ತನಿಖಾ ಸಂಸ್ಥೆ ಕೆಲವು ಆರೋಪಿಗಳಿಗೆ ಪ್ರತ್ಯೇಕ ನೀತಿ ಅನುಸರಿಸಬಾರದು ಎಂದರು. ಅಲ್ಲದೆ ತನಿಖೆಯ ಪಾಸ್ಪೋರ್ಟ್ ಸೀಜ್ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಒಂದೇ ನೀತಿ ಅನುಸರಿಸುವ ಬಗ್ಗೆ ಖಚಿತಪಡಿಸುವಂತೆ ಸಿಬಿಐ ನಿರ್ದೇಶಕರಿಗೆ ಸೂಚಿಸಿದ್ದಾರೆ.
'ಸಾಮಾನ್ಯವಾಗಿ ಪ್ರಕರಣ ದಾಖಲಾದ ನಂತರ ಆರೋಪಿಗಳ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಆದರೆ ಪ್ರಕರಣದಲ್ಲಿ ಸಿಬಿಐ ವಿಭಿನ್ನ ನೀತಿ ಅನುಸರಿಸಿದೆ' ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.
ಹಿರಿಯ ಸರ್ಕಾರಿ ಅಭಿಯೋಜಕ ವಿ.ಕೆ.ಶರ್ಮಾ, ತನಿಖೆಯ ವೇಳೆ ನವೀನ್ ಜಿಂದಾಲ್ ಅವರ ಪಾಸ್ಪೋರ್ಟ್ ವಶಪಡಿಸಿಕೊಂಡಿರಲಿಲ್ಲ. ಆದರೆ ಪಾಸ್ಪೋರ್ಟ್ ಒಪ್ಪಿಸುವಂತೆ ಜಿಂದಾಲ್ ಅವರಿಗೆ ನೋಟಿಸ್ ಸಿಬಿಐ ನೋಟಿಸ್ ನೀಡಿತ್ತು. ಕೆಲವು ದಿನಗಳ ಬಳಿಕ ಅವರು ಪಾಸ್ಪೋರ್ಟ್ನ ಕಲರ್ ಪ್ರತಿಯೊಂದನ್ನು ನೀಡಿ, ಪಾಸ್ಪೋರ್ಟ್ ಸೀಜ್ ಮಾಡದಂತೆ ಮನವಿ ಮಾಡಿದ್ದರು ಎಂದು ಕೋರ್ಟ್ಗೆ ತಿಳಿಸಿದರು
ಸಿಬಿಐನ ಈ ಕ್ರಮದ ಬಗ್ಗೆ ತೀವ್ರ ಅಸಮಾಧನ ವ್ಯಕ್ತಪಡಿಸಿದ ನ್ಯಾಯಾಧೀಶರು, ಕೋರ್ಟ್ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ, ಮುಂದೆ ಎಲ್ಲಾ ಪ್ರಕರಣಗಳಲ್ಲೂ ಒಂದೇ ರೀತಿಯ ಮಾನದಂಡ ಅನುಸರಿಸುವಂತೆ ಸಿಬಿಐ ನಿರ್ದೇಶಕರಿಗೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದರು.
Advertisement