ತಿರುವನಂತಪುರಂ: ಮೆದುಳು ನಿಷ್ಕ್ರಿಯಗೊಂಡಿದ್ದ ಮೂರು ವರ್ಷದ ಮಗುವಿನ ಅಂಗಾಂಗಳನ್ನು ದಾನ ಮಾಡಿದ್ದು, ಈ ಮಗುವನ್ನೀಗ ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದು ಗುರುತಿಸಲಾಗಿದೆ.
ಕರಕ್ಕುಳಂ ಏಣಿಕ್ಕರ ನಿವಾಸಿ ಅಜಿತ್ ಅವರ ಮಗಳು ಅಂಜನಾ. ಈಕೆ ಆಟವಾಡುತ್ತಿದ್ದಾಗ ತಲೆಗೆ ಏಟು ಬಿದ್ದು ಶನಿವಾರ ಇಲ್ಲಿನ ಎಸ್ಎಟಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಬದುಕುಳಿಯುವ ಅವಕಾಶಗಳು ಕಡಿಮೆ, ಎಂದು ಹೇಳಿದ ವೈದ್ಯರು ಬಾಲಕಿಯ ಪೋಷಕರಿಗೆ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿದ್ದರು.
ವೈದ್ಯರ ಮಾತನ್ನು ಕೇಳಿ ಹೃದಯ ವೈಶಾಲ್ಯತೆ ತೋರಿದ ಪೋಷಕರು, ಮಗುವಿನ ಯಕೃತ್, ಎರಡು ಮೂತ್ರಪಿಂಡಗಳು ಹಾಗೂ ಕಣ್ಣುಗಳನ್ನು ದಾನ ಮಾಡಲು ಒಪ್ಪಿದರು.
ಅದೇ ವೇಳೆ ತಿರುವನಂತಪುರಂ ಕೇರಳ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದ ಐದು ವರ್ಷದ ಬಾಲಕನಿಗೆ ಯಕೃತ್ ಮತ್ತು ಮೂತ್ರಪಿಂಡಗಳ ಕಸಿ ಮಾಡಲಾಯಿತು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಆರಂಭವಾದ ಅಂಗಾಂಗ ಕಸಿ ಚಿಕಿತ್ಸೆ ಭಾನುವಾರ ಬೆಳಗ್ಗಿನ ಜಾವ ಮುಗಿದಿದೆ.ಇದೀಗ ಬಾಲಕಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
Advertisement