ಸಂಸತ್ ಕಲಾಪಕ್ಕೆ ಅಡ್ಡಿಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾರಣ: ಬಿಜೆಪಿ ಆರೋಪ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ ನ ಮುಂಗಾರು ಕಲಾಪ ಸುಗಮವಾಗಿ ನಡೆಯದಿರಲು ನೇರ ಕಾರಣ...
ಪ್ರಕಾಶ್ ಜಾವದೇಕರ್(ಸಂಗ್ರಹ ಚಿತ್ರ)
ಪ್ರಕಾಶ್ ಜಾವದೇಕರ್(ಸಂಗ್ರಹ ಚಿತ್ರ)

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ ನ ಮುಂಗಾರು ಕಲಾಪ ಸುಗಮವಾಗಿ ನಡೆಯದಿರಲು ನೇರ ಕಾರಣ ಎಂದು ಬಿಜೆಪಿ ನೇರವಾಗಿ ಆರೋಪಿಸಿದೆ. ಈ ಇಬ್ಬರು ನಾಯಕರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆಪಾದಿಸಿದೆ.

ಕಾಂಗ್ರೆಸ್ ನ ಅನೇಕ ಸಂಸದರಿಗೆ ಕಲಾಪಕ್ಕೆ ನಿರಂತರ ಅಡ್ಡಿಪಡಿಸುವುದು ಇಷ್ಟವಿಲ್ಲ. ಆದರೆ ನಾಯಕರು ಅವರನ್ನು ಕಲಾಪಕ್ಕೆ ಅಡ್ಡಿಪಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಹತಾಶೆಯಿಂದ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವದೇಕರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ.ಪಾರ್ಲಿಮೆಂಟ್ ಕಲಾಪ ನಿಂತುಹೋದರೆ ಸಿಗುವ ಲಾಭವಾದರೂ ಏನು? ಇದರಿಂದ ಪ್ರತಿದಿನ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ನಷ್ಟವಾಗುತ್ತದೆ. ಜನರಿಗೆ ಇದನ್ನೆಲ್ಲ ನೋಡಿ ಸಿಟ್ಟುಬರುತ್ತಿದೆ. ವಿರೋಧಪಕ್ಷದವರ ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ವಿರೋಧಪಕ್ಷದಲ್ಲಿದ್ದಾಗ ಇದೇ ರೀತಿ ಮಾಡಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಜಾವ್ದೇಕರ್, ಸಂಸತ್ತು ಇರುವುದು ಆರೋಗ್ಯಕರ ವಿಷಯಗಳ ಚರ್ಚೆ ಮತ್ತು ಕಾರ್ಯನಿರ್ವಹಣೆಗೆ.ನಾವು ವಿರೋಧಪಕ್ಷದ ಸ್ಥಾನದಲ್ಲಿದ್ದಾಗ ಚಳಿಗಾಲದ ಅಧಿವೇಶನ ಸರಿಯಾಗಿ ನಡೆದಿರಲಿಲ್ಲ. ಆಗ ಯಾವುದೇ ಸಚಿವರ ರಾಜೀನಾಮೆಯನ್ನು ಕೇಳಿರಲಿಲ್ಲ, ಜಂಟಿ ಸಂಸದೀಯ ಸಮಿತಿಯನ್ನು ರಚಿಸುವಂತೆ ಕೋರಿದ್ದೆವು. ನಂತರದ ಸಂಸತ್ತು ಕಲಾಪದಲ್ಲಿ ಅವರು ಅದಕ್ಕೆ ಒಪ್ಪಿಕೊಂಡಿದ್ದರು ಎಂದು ಜಾವ್ದೇಕರ್ ಹೇಳಿದರು.

ಇದಕ್ಕಾಗಿ ನಾವು ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ಅಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲಿ, ವಿಷಯ ಚರ್ಚೆಗೆ ಬರಲಿ ಎಂದು ತಿಳಿಸಿದರು.

ಜುಲೈ 21ರಂದು ಸಂಸತ್ತು ಕಲಾಪ ಆರಂಭಗೊಂಡ ದಿನದಿಂದ ವಿರೋಧ ಪಕ್ಷದವರು ವಿದೇಶಾಂಗ ಸಚಿವೆ ಸುಷ್ಮಾ ಸ್ವ ರಾಜ್ ಅವರ ರಾಜೀನಾಮೆಗೆ ಪಟ್ಟು ಹಿಡಿಯುತ್ತಿದ್ದು, ಕಲಾಪ ಸುಗಮವಾಗಿ ನಡೆಯಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com