ತಿರುವನಂತಪುರ: ಉಗ್ರರ ವಿಚಾರಧಾರೆ ಹಾಗೂ ಚಟುವಟಿಕೆಗಳ ಕುರಿತಂತೆ ಆಕರ್ಷಿತನಾದ ಕೇರಳ ಮಾಜಿ ಪತ್ರಕರ್ತನೊಬ್ಬ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಗೆ ಸೇರಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತಂತೆ ಕೇರಳ ಪೊಲೀಸರಿಗೆ ಮಾಹಿತಿ ನೀಡಿರುವ ಕೇಂದ್ರ ಗುಪ್ತಚರ ಇಲಾಖೆ, ಪಾಲಕ್ಕಾಡ್ ನಲ್ಲಿರುವ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕೆಲಸಮಾಡುತ್ತಿದ್ದ ಪತ್ರಕರ್ತನೊಬ್ಬ ಇಸಿಸ್ ಉಗ್ರ ಸಂಘಟನೆಯ ವಿಚಾರಧಾರೆಗಳಿಂದ ಪ್ರೇರೇಪಿನಾಗಿದ್ದು, ಇಸಿಸ್ ಸಂಘಟನೆಗೆ ಸೇರ್ಪಡೆಯಾಗಿರುವುದಾಗಿ ತಿಳಿದುಬಂದಿದೆ ಎಂದು ಹೇಳಿದೆ.
ಗಲ್ಫ್ ರಾಷ್ಟ್ರದ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಈ ಪತ್ರಕರ್ತ ಅಲ್ಲಿಂದಲೇ ಸಿರಿಯಾಗೆ ಹೋಗಿರುವುದಾಗಿ ಹಲವು ಶಂಕೆಗಳು ವ್ಯಕ್ತವಾಗುತ್ತಿದೆ, ಕಳೆದ ಕೆಲವು ವರ್ಷಗಳ ಹಿಂದೆ ಪಲಕ್ಕಡ್ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಈತ ಕೆಲವು ತಿಂಗಳ ಬಳಿಕ ಇಸಿಸ್ ಉಗ್ರ ಸಂಘಟನೆ ಕುರಿತಂತೆ ತನ್ನ ಕುಟುಂಬಸ್ಥರೊಂದಿಗೆ ಮಾತನಾಡತೊಡಗಿದ್ದಾನೆ. ಮಗನ ಈ ವರ್ತನೆ ಕಂಡ ಆತನ ತಂದೆಗೆ ಗಾಬರಿಯಾಗಿದೆ. ಈ ವೇಳೆ ಮಗನಿಗೆ ಬುದ್ದಿವಾದ ಹೇಳಿದ್ದಾರೆ. ನಂತರ ಅಪ್ಪನ ಮಾತು ಕೇಳಿದ ಈತ ಪತ್ರಿಕೆಯಲ್ಲಿ ಮಾಡುತ್ತಿದ್ದ ಕೆಲಸವನ್ನು ತೊರೆದು ಗಲ್ಫ್ ನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ತನ್ನ ಇಚ್ಛೆಯನ್ನು ಮನೆಯವರೊಂದಿಗೆ ಹೇಳಿಕೊಂಡಿದ್ದಾನೆ.
8 ತಿಂಗಳ ಬಳಿಕ ಈತ ಗಲ್ಫ್ ರಾಷ್ಟ್ರದ ಪತ್ರಿಕೆಯೊಂದರಲ್ಲಿ ಕೆಲಸ ಪಡೆದಿದ್ದಾನೆ. ನಂತರ ಕೆಲಸ ಮಾಡಲು ಗಲ್ಫ್ ಗೆ ಹೋಗಿದ್ದಾನೆ. ಗಲ್ಫ್ ನಿಂದ ಮನೆಗೆ ಬಂದಾಗಲೆಲ್ಲಾ ಮತ್ತದೇ ಇಸಿಸ್ ಸಂಘಟನೆ ಬಗ್ಗೆ ಮನೆಯವರ ಜೊತೆ ಮಾತನಾಡಲು ಪ್ರಾರಂಭಿಸಿದ್ದಾನೆ. ಈ ವೇಳೆ ಮನೆಯವರು ಆತನಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ, ಬುದ್ದಿವಾದ ಕೇಳದ ಈ ವ್ಯಕ್ತಿ ಇಸಿಸ್ ಸಂಘಟನೆ ಸೇರುವುದಾಗಿ ನಿರ್ಧರಿಸಿ ಆನ್ ಲೈನ್ ನೇಮಕಾತಿ ಕುರಿತಂತೆ ಮಾಹಿತಿ ಪಡೆಯಲು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಆನ್ ಲೈನ್ ಗೆಳೆಯರ ಜೊತೆ ಚಾಟ್ ಮಾಡಿದ ಈ ವ್ಯಕ್ತಿ ಇಸಿಸ್ ಉಗ್ರ ಸಂಘಟನೆ ಸೇರುವ ಕುರಿತಂತೆ ಮಾಹಿತಿ ಕೇಳಿದ್ದಾನೆ. ಆದರೆ, ಆತನೊಂದಿಗೆ ಚಾಟ್ ಮಾಡಿದ ವ್ಯಕ್ತಿ ಕೇಂದ್ರ ಗುಪ್ತಚರ ಇಲಾಖೆಗೆ ಹತ್ತಿರ ಇರುವ ವ್ಯಕ್ತಿಯಾದ್ದರಿಂದ ಈ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಕುರಿತಂತೆ ಈ ಬಗ್ಗೆ ಈಗಾಗಲೇ ಕೇರಳ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಮಾಜಿ ಪತ್ರಕರ್ತ ಈಗಾಗಲೇ ಸಿರಿಯಾ ಸಂಘಟನೆ ಸೇರಿದ್ದು, ಇಸಿಸ್ ಉಗ್ರ ಸಂಘಟನೆಯ ಕ್ಯಾಂಪ್ ವೊಂದರಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.
Advertisement