ನವದೆಹಲಿ: ಜಾರ್ಖಂಡ್ ನ ದುರ್ಗಾ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಪ್ರಮುಖ ಕಾರಣ ಅವ್ಯವಸ್ಥೆಯಾಗಿದ್ದು, ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಇಲ್ಲಿನ ಆಡಳಿತ ಮಂಡಳಿ ಹೊರಬೇಕಿದೆ ಎಂದು ಹೇಳಿರುವ ಗೊಡ್ಡಾ ಪ್ರದೇಶದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಇದೀಗ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ಸೋಮವಾರ ಹೇಳಿಕೊಂಡಿದ್ದಾರೆ.
ದೇಗುಲದ ಕಾಲ್ತುಳಿತ ಕುರಿತಂತೆ ಇಂದು ಮಾತನಾಡಿರುವ ಅವರು, ಘಟನೆ ಸಂಭವಿಸುವುದಕ್ಕೆ ಅವ್ಯವಸ್ಥೆ ಕಾರಣವಾಗಿದ್ದು, ಇದರಲ್ಲಿ ನನ್ನ ತಪ್ಪಿದೆ ಎಂಬುದು ಗೊತ್ತಾಗಿದೆ. ಹಾಗಾಗಿ ಘಟನೆ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಘಟನೆಯೊಂದು ಎಲ್ಲರಿಗೂ ಸರಿಯಾದ ಪಾಠ ಹೇಳಿಕೊಟ್ಟಿದ್ದು, ಕೂಡಲೇ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಇದೀಗ ಅವ್ಯವಸ್ಥೆಯಿದ್ದು, ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಕಾಲಾವಕಾಶ ಬೇಕಿದೆ. ಘಟನೆ ಮರುಕಳಿಸದಂತೆ ಸ್ಥಳದಲ್ಲಿ ಸುದೀರ್ಘಾವಧಿಯ ಯೋಜನೆ ಕೈ ಗೊಳ್ಳುವ ಅವಶ್ಯಕತೆ ಇದ್ದು, ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಮನವಿ ಮಾಡಲಾಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ದಿಯೋಗಢ್ ನ ಬೆಲಬಗಾನ್ನಲ್ಲಿರುವ ದುರ್ಗಾ ದೇವಿ ದೇಗುಲದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ ಇತ್ತು. ಹೀಗಾಗಿ ದೇವರ ದರ್ಶನಕ್ಕಾಗಿ ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸಿದ್ದರು. ಸಮಯ ಕಳೆಯುತ್ತಿದ್ದಂತೆ ದೇಗುಲದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಸ್ಥಳದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ನೂಕುನುಗ್ಗಲು ಉಂಟಾಗಿದೆ. ನಂತರ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ ಸ್ಥಳದಲ್ಲಿ 11 ಜನ ಸಾವನ್ನಪ್ಪಿದ್ದರಲ್ಲದೇ, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Advertisement