ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಮೊಬೈಲ್ ನಲ್ಲಿ ದೃಶ್ಯ ಸೆರೆ

ದೇವಾಲಯಕ್ಕೆ ಆಗಮಿಸಿದ್ದ 16 ವರ್ಷದ ಆಪ್ರಾಪ್ತ ಯುವತಿಗೆ 6 ಮಂದಿ ಪಾನಮತ್ತ ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ...
ಮೊಬೈಲ್ ಫೋನಿನಲ್ಲಿ ಸೆರೆಯಾದ ಹಲ್ಲೆಯ ದೃಶ್ಯ
ಮೊಬೈಲ್ ಫೋನಿನಲ್ಲಿ ಸೆರೆಯಾದ ಹಲ್ಲೆಯ ದೃಶ್ಯ

ಡೆಹರಾಡೂನ್: ದೇವಾಲಯಕ್ಕೆ ಆಗಮಿಸಿದ್ದ 16 ವರ್ಷದ ಆಪ್ರಾಪ್ತ ಯುವತಿಗೆ 6 ಮಂದಿ ಪಾನಮತ್ತ ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ.

ನೈನಿತಾಲ್ ನ ರಾಮನಗರದಲ್ಲಿರುವ ಗರ್ಜಿಯಾ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಸೋದರ ಮಾವನೊಂದಿಗೆ ದೇವಾಲಯಕ್ಕೆ ಆಗಮಿಸಿದ್ದ ವೇಳೆ 6 ಮಂದಿ ಪಾನಮತ್ತ ಯುವಕರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಮತ್ತು ಆಕೆಯೊಂದಿಗಿದ್ದ ಯುವಕ ನದಿ ನೀರಿನ ಬಳಿ ತೆರಳಿದಾಗ ಅಲ್ಲಿಯೇ ಮದ್ಯಪಾನ ಮಾಡುತ್ತಿದ್ದ ಯುವಕರು ಇವರನ್ನು ನೋಡಿ ಅಸಭ್ಯವಾಗಿ ಟೀಕೆ ಮಾಡಿದ್ದಾರೆ. ಈ ವೇಳೆ ಯುವತಿಯೊಂದಿಗಿದ್ದ ಯುವಕ ಚಕಾರವೆತ್ತಿದಾಗ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಅಲ್ಲದೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಯುವತಿ ಮತ್ತು ಆಕೆಯೊಂದಿಗೆ ಇದ್ದ ಯುವಕನಿಗೆ ಯುವಕರು ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ನದಿ ನೀರಿನಲ್ಲಿ ಯುವಕನನ್ನು ಮುಳುಗಿಸುವ ಮೂಲಕ ಆತನ ಹತ್ಯೆಗೂ ಅವರು ಯತ್ನಿಸಿದ್ದಾರೆ. ಇವಿಷ್ಟೂ ದೃಶ್ಯಾವಳಿಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ 6 ಯುವಕರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಸಮೀಪದ ಮೊರಾದಾಬಾದ್ ಮೂಲದವರೆಂದು ತಿಳಿದುಬಂದಿದೆ. ಬಂಧಿತರನ್ನು ವಿಕ್ಕಿ, ಗಜೇಂದ್ರ ಸಿಂಗ್,  ರಣವೀರ್, ಅಮಿತ್, ಸಂಜೀವ್ ಕುಮಾರ್, ಅಮಿತ್ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತನಿಖಾ ವರದಿಗಳ ಪ್ರಕಾರ ಈ ಆರು ಮಂದಿಯೂ ಸ್ಥಳೀಯ ರೌಡಿಗಳು ಎಂದು ತಿಳಿದುಬಂದಿದೆ. ಗೂಂಡಾಗಿರಿ ಮೂಲಕ ಸ್ಥಳೀಯ ವ್ಯಾಪಾರಿಗಳನ್ನು ಹೆದರಿಸಿ ಹಣ ಕಿತ್ತುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com