ನವದೆಹಲಿ: ಭೂಸ್ವಾಧೀನ ಮಸೂದೆ ಬಗ್ಗೆ ನಿಲುವು ಬದಲಿಸಿರುವ ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಯುಪಿಎ-2 ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಭೂಸ್ವಾಧೀನ ಮಸೂದೆ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ರಾಜ್ಯಗಳಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಭೂ ಸುಗ್ರೀವಾಜ್ಞೆ- ಸ್ಪಷ್ಟ ಕಾರಣಗಳು ಎಂಬ ಲೇಖನವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅರುಣ್ ಜೇಟ್ಲಿ, 2013 ರಲ್ಲಿ ಮಂಡನೆಯಾಗಿದ್ದ ಭೂಸ್ವಾಧೀನ ಮಸೂದೆಯನ್ನು ಅಸ್ಪಷ್ಟತೆ ಹಾಗೂ ದೋಷಗಳನ್ನು ಹೊಂದಿದ್ದ ಕಳಪೆ ಕರಡು ಶಾಸನ ಎಂದು ಟೀಕಿಸಿದ್ದಾರೆ.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆ-2013 ಕ್ಕೆ ತಿದ್ದುಪಡಿ ತರಬೇಕೆಂಬುದು ರಾಜ್ಯ ಸರ್ಕಾರಗಳ ಮನವಿಯಾಗಿತ್ತು, ಇದೇ ಕಾರಣದಿಂದ ಎನ್.ಡಿ.ಎ ಸರ್ಕಾರ ಯುಪಿಎ ಅವಧಿಯಲ್ಲಿ ಜಾರಿಯಾಗಿದ್ದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ತನ್ನ ನಿಲುವು ಬದಲಿಸಿ, ಸುಗ್ರೀವಾಜ್ಞೆಯನ್ನು ವಿರೋಧಿಸಿದೆ ಎಂದು ಜೇಟ್ಲಿ ಅಸಮಾಧಾನ ಹೊರಹಾಕಿದ್ದಾರೆ.
ತಿದ್ದುಪಡಿ ಭೂಸ್ವಾಧೀನ ಮಸೂದೆ ಎರಡು ಬಾರಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ರಾಜಕೀಯ ಬಿಕ್ಕಟ್ಟು ಮುಂದುವರಿದ ಕಾರಣ ಮಸೂದೆ ಇತ್ಯರ್ಥವಾಗದೆ ಸಂಸತ್ ನ ಸ್ಥಾಯಿ ಸಮಿತಿಯಲ್ಲೇ ಉಳಿದಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
Advertisement