ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ನಾಳೆ ಅಂತಿಮ ತೀರ್ಪು ಪ್ರಕಟಿಸಲಿದೆ.
ಅಪಘಾತ ಸಂಭವಿಸಿದ ವೇಳೆ ಸಲ್ಮಾನ್ ಖಾನ್ ಕಾರು ಚಾಲನೆ ಮಾಡುತ್ತಿದ್ದ ಎಂದು ಹೇಳಿದ್ದ ಅವರ ಮಾಜಿ ಪೊಲೀಸ್ ಅಂಗರಕ್ಷಕ ರವೀಂದ್ರ ಪಾಟೀಲ್ ಅವರ ಸಾಕ್ಷ್ಯವನ್ನು ಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸಲ್ಲುಗೆ ರಿಲೀಫ್ ಸಿಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಮೇನಲ್ಲಿ ಸೆಷನ್ಸ್ ನ್ಯಾಯಾಲಯ 2002ರ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತೀರ್ಪಿನ ಉಕ್ತಲೇಖನ ಇಂದು ಮುಂದುವರಿದಿದ್ದು, ಅಂತಿಮ ತೀರ್ಪನ್ನು ನಾಳೆಗೆ ಘೋಷಿಸುವುದಾಗಿ ನ್ಯಾಯಮೂರ್ತಿ ಎಆರ್ ಜೋಶಿ ಅವರು ಹೇಳಿದ್ದಾರೆ.
ರವೀಂದ್ರ ಪಾಟೀಲ್ ಸಾಕ್ಷ್ಯ ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು 3ನೇ ದಿನದ ತೀರ್ಪಿನ ಉಕ್ತಲೇಖನದ ಸಂದರ್ಭದಲ್ಲಿ ನ್ಯಾಯಾಧೀಶರು ತಿಳಿಸಿದರು. ಕೋರ್ಟ್ ನಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿರುವ ಪಾಟೀಲ್ ಸಾಕ್ಷ್ಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದಿದ್ದರು.
Advertisement