ನವದೆಹಲಿ: ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಯ ಹೊಣೆಯನ್ನು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟಿರುವ ಸುಪ್ರೀಂಕೋರ್ಟ್, ಸಿಜೆಐ ಜತೆ ಸಮಾಲೋಚನೆ ನಡೆಸಿ ಈ ಸಂಬಂಧದ ವಿಧಿ ವಿಧಾನ ಪ್ರಸ್ತಾವನೆ(ಎಂಒಪಿ) ಸಿದ್ಧಪಡಿಸುವಂತೆ ಸೂಚಿಸಿದೆ.
ಅಲ್ಲದೆ. ಆ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನೂ ಸೂಚಿಸಿದೆ. ಕೊಲಿಜಿಯಂ ವ್ಯವಸ್ಥೆ ಸುಧಾರಣೆ ಕುರಿತ ನ್ಯಾಯ ಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಸಂವಿಧಾನ ಪೀಠ ಬುಧವಾರ ತನ್ನ ಈ ಅಭಿಪ್ರಾಯ ತಿಳಿಸಿದೆ.
ಇದೇ ವೇಳೆ, ವಿಧಿವಿಧಾನ ಪ್ರಸ್ತಾವನೆ ಸಿದ್ಧಪಡಿಸುವುದು ಆಡಳಿತಾತ್ಮಕ ಹೊಣೆಯಾ ಗಿದ್ದು, ನ್ಯಾಯಾಂಗ ಅದರಿಂದ ಹೊರಗಿರಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ಸಂವಿಧಾನ ಪೀಠ ಒಪ್ಪಿಕೊಂಡಿದೆ.
ಸಂವಿಧಾನ ಪೀಠ ಸೂಚಿಸಿದ ಪ್ರಮುಖ ಕ್ರಮಗಳು
_ ಹೈಕೋರ್ಟ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ನಿರ್ದಿಷ್ಟ ವಯೋಮಿತಿ ನಿಗದಿ
_ ನೇಮಕದಲ್ಲಿ ಪಾರದರ್ಶಕತೆ ಮತ್ತು ಬದ್ಧತೆ ತರುವ ನಿಟ್ಟಿನಲ್ಲಿ ನೇಮಕ ನಿರ್ಧಾರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು
_ ನೇಮಕ ಕುರಿತ ಪ್ರತಿ ಹಂತದ ವಿವರವನ್ನು ಕಾನೂನು ಸಚಿವಾಲಯ ಹಾಗೂ ಸಂಬಂಧಿತ ನ್ಯಾಯಾಲಯಗಳ ವೆಬ್ ಸೈಟ್ನಲ್ಲಿ ಪ್ರಕಟಿಸಬೇಕು
_ ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ಸುಪ್ರೀಂ ನಲ್ಲಿ ಪ್ರತ್ಯೇಕ ಕಾರ್ಯಾಲಯ ರಚನೆ
_ ಕೊಲಿಜಿಯಂ ಎಂಒಪಿಯಲ್ಲಿ ದೂರು ನಿರ್ವಹಣಾ ವ್ಯವಸ್ಥೆ ಕೂಡ ಅಳವಡಿಸಬೇಕು