ದೇಶ ಅಚಾತುರ್ಯವನ್ನು ಕ್ಷಮಿಸುತ್ತದೆ, ನಂಬಿಕೆದ್ರೋಹವನಲ್ಲ: ಮೋದಿ

ಆಮ್ ಆದ್ಮಿ ಪಕ್ಷ ನಕಲಿ ಕಂಪನಿಗಳ ಮೂಲಕ ದೇಣಿಗೆ ಪಡೆದಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಆಮ್ ಆದ್ಮಿ ಪಕ್ಷ ನಕಲಿ ಕಂಪನಿಗಳ ಮೂಲಕ ದೇಣಿಗೆ ಪಡೆದಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ದೆಹಲಿಯ ರೋಹಿನಿಯಲ್ಲಿ ಪಕ್ಷದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆ ಒಂದು ವೇಳೆ ಆಚಾತುರ್ಯವನ್ನು ಕ್ಷಮಿಸುತ್ತಾರೆ ಹೊರತು ನಂಬಿಕೆದ್ರೋಹವನ್ನಲ್ಲ ಎಂದು ಆಪ್ ವಿರುದ್ಧ ವಾಗ್ದಾಳಿ ನಡೆಸಿದರು.

ದೇಣಿಗೆ ಹಣ ಪಡೆದಿರುವ ಆಪ್ ಪಕ್ಷ ಇದೀಗ ಮತ್ತೊಂದು ವರಸೆ ತೋರಿಸುತ್ತಿದೆ. ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಅಥವಾ ಆಪ್ ಯಾರು ಅತಿ ಹೆಚ್ಚು ಭ್ರಷ್ಟ ಯಾರು ಎಂಬುದು ತನಿಖೆಯಾಗಲಿ ಎಂದು ಹೇಳುತ್ತಿದೆ ಎಂದು ಮೋದಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಗೆದ್ದಿದ್ದ ಆಪ್ ಪಕ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಆದರೆ ಮಾತು ಮರೆತ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷದ ಬೇಷರತ್ತು ಬೆಂಬಲ ಪಡೆದಿದ್ದರು. ಅದನ್ನು ಪ್ರಶ್ನಿಸಿದರೆ ತಾವಾಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡುವಂತೆ ಕೋರಿಲ್ಲ. ಅವರಾಗೆ ನೀಡಿದ್ದರು ಎಂದು ತಮ್ಮ ನಂಬಿಕೆದ್ರೋಹವನ್ನು ಸಮರ್ಥಿಸಿಕೊಂಡಿದ್ದರು.

ಅದರಂತೆ ಮತ್ತೊಮ್ಮೆ ಆಪ್ ಪಕ್ಷ ತಾವಾಗೆ ಯಾರನ್ನು ದೇಣಿಗೆ ನೀಡುವಂತೆ ಕೇಳಿಲ್ಲ. ಅವರಾಗೆ ನೀಡಿದರು ಎಂಬ ಸಿದ್ದ ಉತ್ತರವನ್ನು ನೀಡುತ್ತಾ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಮೋದಿ ಕಿಡಿಕಾರಿದರು.

ಕಳೆದ ಆಗಸ್ಟ್‌ನಲ್ಲಿ ಆಪ್ ಪಕ್ಷದಿಂದ ಹೊರಬಂದು ಆವಂ ಪಕ್ಷ ಸ್ಥಾಪಿಸಿಕೊಂಡಿರುವ ಕೆಲವರು ಆಮ್ ಆದ್ಮಿ ಪಕ್ಷಕ್ಕೆ 51 ಬೋಗಸ್ ಕಂಪನಿಗಳಿಂದ ಹಣ ಬಂದಿದೆ. ಈ ಪೈಕಿ ನಾಲ್ಕು ಕಂಪನಿಗಳು ತಲಾ 50 ಲಕ್ಷ ರು. ಹಣ ನೀಡಿವೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆನೆಂದರೆ ಒಂದು ಕಂಪನಿಯ ವಿಳಾಸದಲ್ಲಂತೂ ಗುಡಿಸಲು ಪತ್ತೆಯಾಗಿದೆ ಎಂದು ಆರೋಪ ಮಾಡಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com