ಭುವನೇಶ್ವರ್: ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಒಡಿಶಾದ ಚಾಂಡಿಪುರದಲ್ಲಿರುವ ಸೇನಾ ನೆಲೆಯಲ್ಲಿ ಇಂದು ಬೆಳಗ್ಗೆ ಪೃಥ್ವಿ-2 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನಿಗದಿತ ಗುರಿಯನ್ನು ನಿರ್ಧಿಷ್ಟ ಸಮಯದಲ್ಲಿ ತಲುಪುವ ಮೂಲಕ ಕ್ಷಿಪಣಿ ಯಶಸ್ವಿಯಾಗಿದೆ. ಕ್ಷಿಪಣಿ ಗುರಿ ತಲುಪಿದ್ದನ್ನು ಭಾರತೀಯ ರಾಡಾರ್ಗಳು ಪತ್ತೆ ಮಾಡಿದ್ದು, ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.
ಪೃಥ್ವಿ-2 ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, 350 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿಯನ್ನು ಕರಾವಳಿ ಭದ್ರತೆಗಾಗಿ ಸಂಶೋಧಿಸಲಾಗಿದ್ದು, ಶತ್ರು ಪಾಳಯದ ನೌಕೆಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದೆ. ಇನ್ನು ಕ್ಷಿಪಣಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇದು ಖಡಾಂತರ ಕ್ಷಿಪಣಿಯಾಗಿದ್ದು. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಪ್ರಯೋಗಿಸಬಹುದಾಗಿದೆ.
ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಗುರುವಾರ ಬೆಳಗ್ಗೆ ಸಂಯುಕ್ತ ಪರೀಕ್ಷಾ ವಲಯದಲ್ಲಿನ 3ನೇ ಸಂಕೀರ್ಣದಿಂದ ಈ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಪೃಥ್ವಿ-2 ಕ್ಷಿಪಣಿ 350 ಕಿ.ಮೀ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದೆ ಎಂದು ಐಟಿಆರ್ ಅಧ್ಯಕ್ಷ ಎಂ.ವಿ.ಕೆ.ವಿ ಪ್ರಸಾದ್ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ.
Advertisement