ನವದೆಹಲಿ: ಪರೀಕ್ಷೆಯೊಂದೇ ಜೀವನವಲ್ಲ. ಒತ್ತಡಕ್ಕೆ ಒಳಗಾಗದಿರಿ. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ವಿದ್ಯಾರ್ಥಿಗಳಿಗೆ ನೀಡಿರುವ ಸಲಹೆ. ಭಾನುವಾರ ಆಕಾಶ ವಾಣಿಯಲ್ಲಿ `ಮನ್ ಕಿ ಬಾತ್' ಕಾರ್ಯ ಕ್ರಮದಲ್ಲಿ ಮಾತನಾಡಿದ ಮೋದಿ, `ಈ ಬಾರಿ ನಿಮ್ಮ ಪರೀಕ್ಷೆಯ ಸಿದ್ಧತೆ ವೇಳೆ ನಿಮ್ಮೊಂದಿಗೆ ನಾನಿದ್ದೇನೆ' ಎನ್ನುತ್ತಲೇ ಬಹಳ ಆತ್ಮೀಯತೆಯಿಂದ ಮಕ್ಕಳನ್ನು ತನ್ನತ್ತ ಸೆಳೆದರು.
ತಾವು ವಿದ್ಯಾರ್ಥಿಯಾಗಿದ್ದಾಗಿನ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಒತ್ತಡ ಕಡಿಮೆ ಮಾಡಲು ಯತ್ನಿಸಿದರು. ನಾನೇನೂ ಅತ್ಯದ್ಭುತ ವಿದ್ಯಾರ್ಥಿಯಾಗಿರಲಿಲ್ಲ. ನನ್ನ ಕೈಬರಹವಂತೂ ಅಧ್ಯಾಪಕರಿಗೆ ಅರ್ಥವೇ ಆಗುತ್ತಿರಲಿಲ್ಲ. ಒಳ್ಳೆಯ ಅಂಕ ಪಡೆದೇ ಇಲ್ಲ ಎಂದ ಪ್ರಧಾನಿ ಮೋದಿ, ಒತ್ತಡ, ಚಿಂತೆಯಿಲ್ಲದೆ ಪರೀಕ್ಷೆಗೆ ಸಿದ್ಧರಾಗಿ. ನಿಜವಾದ ಸ್ಪರ್ಧೆಯಿಂದಷ್ಟೇ ಯಶಸ್ಸು ಗಳಿಸಲು ಸಾಧ್ಯ ಎಂದರು.
ಇದೇ ವೇಳೆ, ಪೋಲ್ ವಾಲ್ಟ್ ಪಟು ಸರ್ಗೀ ಬುಬ್ಕಾರ ಸಾಧನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಬುಬ್ಕಾ ಅವರು 35 ಬಾರಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ನೀವೂ ಅಷ್ಟೆ, ನಿಮ್ಮನ್ನು ನಿಮಗೇ ಹೋಲಿಕೆ ಮಾಡಿಕೊಂಡು ಯಶಸ್ಸಿನತ್ತ ಹೆಜ್ಜೆಹಾಕಿ ಎಂದು ಕಿವಿಮಾತು ಹೇಳಿದರು. ಈ ನಡುವೆ, ಹೆತ್ತವರಿಗೂ ಸಲಹೆ ನೀಡಿದ ಅವರು, ನಿಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.
Advertisement