ಮುಂಬೈ: ವಿವಾದಿತ ಭೂಸ್ವಾಧೀನ ಮಸೂದೆಗೆ ಎನ್ ಡಿಎ ಅಂಗ ಪಕ್ಷ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈತರ ಹಿತಾಸಕ್ತಿಗೆ 'ಧಕ್ಕೆ' ತರುವಂಥ ಪಾಪದ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಕ್ಷದ ಮುಖವಾಣಿ 'ಸಾಮ್ನಾ' ದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಟು ಟೀಕೆ ಮಾಡಿರುವ ಶಿವಸೇನೆ, ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಂಕಷ್ಟ ಹೆಚ್ಚಾಗಿದೆ ಎಂದು ಆರೋಪಿಸಿದೆಯಲ್ಲದೇ ಈ ಸರ್ಕಾರಕ್ಕೆ ರೈತರ ಸಮಸ್ಯೆ ಕಟ್ಟಿಕೊಂಡು ಏನೂ ಆಗಬೇಕಿಲ್ಲ ಎಂದಿದೆ.
ವಿವಾದಿತ ಮಸೂದೆಯನ್ನು 'ನಿರ್ದಯ' ಕಾನೂನು ಎಂದು ಟೀಕಿಸಿರುವ ಶಿವಸೇನೆ, ಅದು ರೈತರ ಅಸ್ತಿತ್ವವನ್ನೇ ಅಳಿಸಿಹಾಕಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕಾರ್ಪೊರೇಟ್ ವಲಯಕ್ಕೆ ಸರ್ಕಾರ ಕೈಜೋಡಿಸುತ್ತಿದೆ ಎಂದು ಆರೋಪಿಸಿರುವ ಶಿವಸೇನೆ, ಸರ್ಕಾರವು ರಿಯಲ್ ಎಸ್ಟೇಟ್ ಏಜೆಂಟ್ ಪಾತ್ರ ನಿರ್ವಹಿಸುತ್ತಿದೆಯೇ? ಎಂಬ ಪ್ರಶ್ನೆಗಳು ಎತ್ತಲಾಗುತ್ತಿದೆ ಎಂದು ಟೀಕಿಸಿದೆ.
ರೈತರು ಅಪಾರ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಸರ್ಕಾರ ಅವರಿಗೆ ಏನಾದರು ಸಹಾಯ ಮಾಡುವ ಬದಲಾಗಿ ಅವರ ಭೂಮಿಯನ್ನು ಕಸಿದುಕೊಳ್ಳುವತ್ತ ಒಲವು ತೋರಿದರೆ ಬಂಡಾಯ ಬೆಂಕಿ ಹರಡಲಿದೆ' ಎಂದು ಎಚ್ಚರಿಸಿದೆ.
'ಅಧಿಕಾರದಲ್ಲಿದ್ದುಕೊಂಡು ನಾವು ರೈತರ ಹಿತಾಸಕ್ತಿಗೆ ಧಕ್ಕೆ ತರುವ ಪಾಪವನ್ನು ನಾವು ಮಾಡುವುದಿಲ್ಲ' ಎಂದೂ ಶಿವಸೇನೆ ಹೇಳಿಕೊಂಡಿದೆ.
Advertisement